ನವದೆಹಲಿ (ಪಿಟಿಐ): ಪ್ರತಿಯೊಬ್ಬ ಅರ್ಹ ಭಾರತೀಯ ನಾಗರಿಕರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡಲಾಗುವುದು ಎಂದು ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರರ್ (ಎನ್ಪಿಎ) ಸಿದ್ಧಪಡಿಸುತ್ತಿದ್ದು, ಕಾಲಮಿತಿಯಲ್ಲಿ ಗುರುತಿನ ಚೀಟಿ ನೀಡಲಾಗುವುದು ಎಂದು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
‘ಯಾರು ಭಾರತೀಯ ನಾಗರಿಕರು, ಯಾರು ಭಾರತೀಯ ನಾಗರಿಕರು ಅಲ್ಲ ಎಂಬುದನ್ನು ಪತ್ತೆಹಚ್ಚುತ್ತೇವೆ’ ಎಂದರು. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.
ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಮತ್ತು ಎನ್ಪಿಆರ್ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವ ಮೂಲಕ ಸಮಗ್ರವಾದ ಮಾಹಿತಿಯನ್ನು ಯಾವ ರೀತಿ ಸಂಗ್ರಹಿಸಬಹುದು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆದಷ್ಟು ಬೇಗ ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದರು.
ಯಾರು ಭಾರತೀಯ ನಾಗರಿಕರು, ಯಾರು ಅಲ್ಲ ಎಂಬುದನ್ನು ಎನ್ಪಿಆರ್ ಪತ್ತೆಹಚ್ಚಲಿದೆ. ಎಲ್ಲ ಅರ್ಹ ನಾಗರಿಕರಿಗೂ ಗುರುತಿನ ಚೀಟಿ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ವಿದೇಶಿಯರು ಅಕ್ರಮವಾಗಿ ಗಡಿ ಮೂಲಕ ಭಾರತಕ್ಕೆ ನುಸುಳುವುದನ್ನು ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
ಭಾರತ – ಬಾಂಗ್ಲಾದೇಶ ನಡುವೆ 4,096 ಕಿ.ಮೀ ಗಡಿ ಪ್ರದೇಶವಿದ್ದು, ಈಗಾಗಲೇ 3,300 ಕಿ.ಮೀ. ವ್ಯಾಪ್ತಿಯಲ್ಲಿ ಮುಳ್ಳುತಂತಿ ಅಳವಡಿಸಲಾಗಿದೆ. ಉಳಿದ ಭಾಗದಲ್ಲೂ ತಂತಿ ಅಳವಡಿಸಲಾಗುವುದು ಎಂದರು.
ನದಿ ಭಾಗ, ಗುಡ್ಡಗಾಡು ಮತ್ತು ಮರುಭೂಮಿ ಇರುವ ಪ್ರದೇಶದಲ್ಲಿ ಮುಳ್ಳುತಂತಿ ಹಾಕುವುದು ಕಷ್ಟಕರವಾಗಿದೆ ಎಂದು ತಿಳಿಸಿದರು.