ಸೋನೆಪತ್/ಮುಂಬೈ (ಪಿಟಿಐ): ತಾವು ಎಬ್ಬಿಸುತ್ತಿರುವ ಅಲೆಯ ಅಬ್ಬರವನ್ನು ನೋಡಲಾಗದೆ ಎದುರಾಳಿ ಪಕ್ಷಗಳು ತಮ್ಮ ವಿರುದ್ಧ ಬೊಬ್ಬೆ ಹಾಕುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.
‘ಲೋಕಸಭಾ ಚುನಾವಣೆಯಲ್ಲಿ ನಾನು ಪ್ರಚಾರ ನಡೆಸುತ್ತಿದ್ದಾಗ ಯಾರೂ ಬೊಬ್ಬೆ ಹಾಕಲಿಲ್ಲ. ಆದರೆ ಈಗ ಕೆಲವು ಪಕ್ಷಗಳು ನಾನು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ರ್್ಯಾಲಿಗಳನ್ನು ನಡೆಸುತ್ತಿರುವ ಬಗ್ಗೆ ಟೀಕಿಸುತ್ತಿವೆ’ ಎಂದು ಹರಿಯಾಣದ ಸೋನೆಪತ್ನಲ್ಲಿ ಹೇಳಿದರು.
ಸೇನಾ ಕಟುನುಡಿ: ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿರುವ ಶಿವಸೇನಾ, ‘ಮೋದಿ ಮಹಾರಾಷ್ಟ್ರದ ರಾಜಕೀಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಗಡಿಯಲ್ಲಿ ನೆರೆ ದೇಶ ನಡೆಸುತ್ತಿರುವ ದಾಳಿ ತಡೆಯಲು ಪ್ರಯತ್ನಿಸಬೇಕು’ ಎಂದು ಹೇಳಿದೆ.
‘ಮೋದಿ ಅವರು ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಮುಳುಗಿದ್ದಾರೆ. ಪ್ರಧಾನಿಯಾದವರು ಹೀಗೆ ಸಾಲು ಸಾಲು ಪ್ರಚಾರಸಭೆ ನಡೆಸುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ’ ಎಂದು ಪಕ್ಷದ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಲಾಗಿದೆ.
ಮೋದಿ ಏನನ್ನೂ ಮಾಡಿಲ್ಲ: ರಾಹುಲ್
ಮಹದ್, ಮಹಾರಾಷ್ಟ್ರ: ಪಾಕಿಸ್ತಾನ ಪಡೆ ಅಪ್ರಚೋದಿತ ದಾಳಿ ನಡೆಸುತ್ತಿದ್ದರೂ ಪ್ರಧಾನಿ ಮೋದಿ ಅವರು ಅದನ್ನು ತಡೆಯಲು ಏನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್್ ಉಪಾಧ್ಯಕ್ಷ ರಾಹುಲ್್ ಗಾಂಧಿ ಟೀಕಿಸಿದ್ದಾರೆ.
‘ಲೋಕಸಭೆ ಚುನಾವಣೆಗೆ ಮುನ್ನ ಅವರು ಚೀನಾ ಹಾಗೂ ಪಾಕಿಸ್ತಾನದ ಬಗ್ಗೆ ವೀರಾವೇಶದಿಂದ ಮಾತನಾಡುತ್ತಿದ್ದರು. ಆದರೆ ಈಗ ಪಾಕ್್ ಕಡೆಯಿಂದ ಪದೇಪದೇ ಕದನ ವಿರಾಮ ಉಲ್ಲಂಘನೆಯಾಗುತ್ತಿದ್ದರೂ ಕೈಕಟ್ಟಿ ಕೂತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ಮೋದಿ ಪ್ರತಿಪಕ್ಷ ನಾಯಕ’: ಮೋದಿ ಅವರನ್ನು ‘ವಿರೋಧ ಪಕ್ಷದ ನಾಯಕ’ ಎಂದು ರಾಹುಲ್ ಚುನಾವಣಾ ಸಭೆಯಲ್ಲಿ ಟೀಕಿಸಿದ್ದಾರೆ.
ರ್್ಯಾಲಿಯಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ‘ಕಳೆದ 60 ವರ್ಷಗಳಲ್ಲಿ ದೇಶ ಏನನ್ನೂ ಸಾಧಿಸಿಲ್ಲ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಟೀಕಿಸಿದ್ದಾರೆ. ಅವರ ಮಾತು ಅಂಬೇಡ್ಕರ್, ಮಹಾತ್ಮ ಗಾಂಧಿ, ಪಟೇಲ್, ನೆಹರು ಅವರ ಕೊಡುಗೆ ಕುರಿತು ಪ್ರಶ್ನೆ ಎತ್ತುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.