ಮಾಗಡಿ: ತಾಲ್ಲೂಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಗಿಯಲು ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದೆ, ಗಣತಿದಾರರು ಅಲೆಮಾರಿ ಬುಡಕಟ್ಟು ಸಮುದಾಯದವರ ಗುಡಿಸಲುಗಳತ್ತ ಸುಳಿಯುತ್ತಿಲ್ಲ ಎಂದು ರಾಜ್ಯ ಅಲೆಮಾರಿ ಬುಡಕಟ್ಟು ಒಕ್ಕೂಟದ ಉಪಾಧ್ಯಕ್ಷ ಬುಡಬುಡಿಕೆ ಮಾರಪ್ಪ ಆರೋಪಿಸಿದ್ದಾರೆ.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅಂಗವಾಗಿ ಅಲೆಮಾರಿ ಬುಡಕಟ್ಟು ಸಮುದಾಯಗಳವರ ಗುಡಿಸಲುಗಳಿಗೆ ಸೋಮವಾರ ಬೇಟಿ ನೀಡಿ ಅಲೆಮಾರಿಗಳ ಬೇಟಿ ಮಾಡಿ ಅವರು ಪ್ರಜಾವಾಣಿಯೊಂದಿಗೆ ಮಾತನಾಡಿದರು.
ತಾಲ್ಲೂಕಿನ ಅಗಲಕೋಟೆ, ದೋಣಕುಪ್ಪೆ ಬಳಿ ಕಳೆದ 20 ವರ್ಷಗಳಿಂದ ಟೆಂಟ್ಗಳನ್ನು ಹಾಕಿಕೊಂಡು 12 ಬುಡಬುಡಿಕೆ ಕುಟುಂಬಗಳು ಸರ್ಕಾರಿ ಸವಲತ್ತಿನಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಬೆಳಗುಂಬ, ಸಿಡುಗನಹಳ್ಳಿ, ನೇತೇನಹಳ್ಳಿ, ಉಡುವೆಗೆರೆಯಲ್ಲಿ ಶಿಳ್ಳೆಕ್ಯಾತರಿದ್ದಾರೆ. ಜೇನುಕಲ್ಲು ಪಾಳ್ಯದಲ್ಲಿ ಇರುವ 30 ಇರುಳಿಗರತ್ತ ಗಣತಿದಾರರು ಸುಳಿದಿಲ್ಲ. ತಾಲ್ಲೂಕು ಆಡಳಿತ ಉಳಿದ 3 ದಿನಗಳಲ್ಲಾದರೂ ಅಲೆಮಾರಿ ಬಡುಕಟ್ಟು ಸಮುದಾಯಗಳ ಸಮೀಕ್ಷೆ ನಡೆಸುವಂತೆ ಬುಡಬುಡಿಕೆ ಮಾರಪ್ಪ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.