ಗುಂಡ್ಲುಪೇಟೆ: ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಹೇಳಿದರು. ಪಟ್ಟಣದಲ್ಲಿ ರಂಜಾನ್ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಮುಸ್ಲಿಂ ಸಮುದಾಯದವರು ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಟ್ಟಣದ ಮುಸ್ಲಿಂ ಸಮುದಾಯದ ಬಡ ಪೋಷಕರ ಮಕ್ಕಳ ಕಲ್ಯಾಣಕ್ಕೆ ಅನುಕೂಲವಾಗಲು ₹ 50 ವೆಚ್ಚದಲ್ಲಿ ಸಮುದಾಯಭವನ (ಶಾದಿಮಹಲ್) ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಅಲ್ಪಸಂಖ್ಯಾತರ ಇಲಾಖೆ ಯಿಂದ ₹ 20 ಲಕ್ಷ, ಲೋಕಸಭಾ ಸದಸ್ಯರ ಅನುದಾನದಿಂದ ₹ 8 ಲಕ್ಷ, ರಾಜ್ಯಸಭಾ ಸದಸ್ಯರ ಅನುದಾನದಿಂದ ₹ 5 ಲಕ್ಷ ಸೇರಿದಂತೆ ಒಟ್ಟು ₹ 33 ಲಕ್ಷ ಬಿಡುಗಡೆಯಾಗಿದೆ ಎಂದರು.
ಮುಸ್ಲಿಂ ಮುಖಂಡರು ಕಾಂಪೌಂಡ್ ಹಾಗೂ ಅಡುಗೆಮನೆ ನವೀಕರಣಕ್ಕೆ ಹೆಚ್ಚುವರಿಯಾಗಿ ₹ 10 ಲಕ್ಷ ನೀಡ ಬೇಕೆಂಬ ಬೇಡಿಕೆ ಇಟ್ಟಿದ್ದು, ಮುಂದಿನ ದಿನದಲ್ಲಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಸ್ಮಶಾನ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ, ಅಲ್ಲಿ ವಿದ್ಯುತ್ ದೀಪ, ಕುಡಿಯುವ ನೀರು, ತಂಗುದಾಣದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ತಾಲ್ಲೂಕಿನ ಹಲವೆಡೆ ಇರುವ ಮಸೀದಿಗಳ ನವೀಕರಣಕ್ಕೆ ಅನುದಾನ ಕೂಡ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ಜಿ.ಕೆ.ನಾಜೀಮುದ್ದಿನ್, ಎ.ಸಿದ್ದರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ರು, ಸದಸ್ಯರಾದ ಕೆ.ಎಸ್.ಮಹೇಶ್, ಬಿ.ಎಂ.ಮುನಿರಾಜು, ಪುರಸಭಾ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಸುರೇಶಕುಮಾರ್, ಸದಸ್ಯರು ಇತರರು ಹಾಜರಿದ್ದರು.