ಮಣ್ಣಿನ ಹದ ಅರಿವಿಗೆ ಬರುವುದು ತಿರುಗಾಣಿ ತಿರುಗಿ, ಒಂದು ಸ್ಯಾಂಪಲ್ ಹಣತೆ ಕೈಗೆ ಬಂದಾಗಲೇ. ಕೆಲಸ ಅಷ್ಟಕ್ಕೇ ಮುಗಿಯುವುದಿಲ್ಲ. ಆಕಾರ ಪಡೆದುಕೊಂಡ ಹಣತೆ ಹದವಾಗಿ ಬೇಯಬೇಕು, ಅದಕ್ಕಾಗಿಯೇ ಶಾಖಕ್ಕೆ ಮೈಯೊಡ್ಡಿಕೊಳ್ಳುವ ಜೀವಗಳಿವೆ. ಹಚ್ಚುವ ಹಣತೆ ಮಣ್ಣಿನ ಬಣ್ಣದಲ್ಲೇ ಇದ್ದರೆ ಕೊಳ್ಳುವವರು ಕಡಿಮೆ. ಇದು ಬಣ್ಣದ ಕಾಲ. ದೀಪಕ್ಕೇ ಒಂದು ಬಣ್ಣ ಇದೆ.
ಅದನ್ನು ಹಚ್ಚಿದ ಮೇಲೆ ವಾತಾವರಣಕ್ಕೆ ತಕ್ಕಂತೆ ಬಗೆಬಗೆಯ ಬಣ್ಣಗಳು ಮೂಡುತ್ತವೆ. ಹಾಗಿದ್ದೂ ಹಚ್ಚುವ ಹಣತೆಗೂ ಒಂದು ಬಣ್ಣ ಬೇಕು ಎಂದು ಬಯಸುತ್ತಾರೆ. ದೀಪಗಳೀಗ ಕೇವಲ ದೀಪಾವಳಿಯ ರುಜುಗಳಾಗಿಯಷ್ಟೇ ಉಳಿದಿಲ್ಲ; ಅವು ಇಂಟೀರಿಯರ್ ಡೆಕೊರೇಷನ್ನ ಭಾಗಗಳು. ದೀಪದಿಂದ ದೀಪ ಹಚ್ಚುವ ಬೆಳಕಿನಾಟದ ಸೊಗಸಿಗಾಗಿ ಬೇಯುವವರು ನಮ್ಮ ನಡುವೆಯೇ ಇದ್ದಾರೆ.
ಬೆವರು ಬಸಿದು ಅವರು ಮೂಡಿಸುವ ದೀಪಗಳಲ್ಲಿ ನಿರೀಕ್ಷೆಯ ಬತ್ತಿ ಇರಿಸಿ, ಹದವಾದ ಭಾವದ ಎಣ್ಣೆಯಲ್ಲಿ ತೋಯಿಸಿ ಭವಿತವ್ಯದ ಬೆಳಕ ಮೂಡಿಸುತ್ತೇವೆ. ಪಾಟರಿ ಟೌನ್ನ ಹಣತೆ ಉತ್ಪಾದಕರಿಗೆ ಈಗ ಬಿಡುವಿಲ್ಲದ ಕೆಲಸ... ಇನ್ನೇನು ದೀಪಾವಳಿ ಬಂದೇಬಿಟ್ಟಿತಲ್ಲ!