ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ಮಕ್ಕಳನ್ನು ಕೊಂದು ತಂದೆ ಆತ್ಮ ಹತ್ಯೆ

Last Updated 1 ಅಕ್ಟೋಬರ್ 2014, 19:40 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಯೊಬ್ಬರು ತನ್ನ ಅವಳಿ ಮಕ್ಕಳನ್ನು ನೇಣು ಬಿಗಿದು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿ­ಕೊಂಡಿರುವ ಘಟನೆ ರಾಜಾಜಿ­ನಗರ 69ನೇ ಅಡ್ಡರಸ್ತೆಯಲ್ಲಿ ಬುಧ­ವಾರ ನಡೆದಿದೆ.

ಮೂಲತಃ ಕೆಜಿಎಫ್‌ನವರಾದ ಕುಮರೇಶನ್ (39) ಅವರು ವಿಜೇತಾ ಮತ್ತು ವೇದಿಕಾ ಎಂಬ ನಾಲ್ಕು ವರ್ಷದ ಅವಳಿ ಮಕ್ಕಳಿಗೆ ದುಪ್ಪಟ್ಟಾದಿಂದ ಕುತ್ತಿಗೆ ಬಿಗಿದಿದ್ದಾರೆ. ಅವರು ಸಾವನ್ನಪ್ಪಿದ ನಂತರ ತಾವು ಸಹ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ­ದ್ದಾರೆ. ಆಗ ಅವರ ಹಿರಿಯ ಮಗಳು ನೀಸಾ (9), ಕುರುಬರಹಳ್ಳಿಯಲ್ಲಿರುವ ಅತ್ತೆ ಮನೆ­ಯಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಕುಮರೇಶನ್‌, ಹತ್ತು ವರ್ಷಗಳ ಹಿಂದೆ ಸೋನಿ ಅವರನ್ನು ವಿವಾಹವಾಗಿದ್ದರು. ಗರ್ಭಕೋಶದ ತೊಂದರೆಯಿಂದ ಬಳ­ಲು­ತ್ತಿದ್ದ ಸೋನಿ, ಮೂರೂವರೆ ತಿಂಗಳ ಹಿಂದೆ ಮನೆಯಲ್ಲೇ ಆತ್ಮಹತ್ಯೆ ಮಾಡಿ­ಕೊಂಡಿದ್ದರು. ಬೆಳಿಗ್ಗೆ 10 ಗಂಟೆಗೆ ಕುಮರೇಶನ್‌ ಅವರ ತಾಯಿ ಸರಸ್ವತಮ್ಮ, ಪಕ್ಕದ ರಸ್ತೆಯಲ್ಲೇ ಇರುವ ಮತ್ತೊಬ್ಬ ಮಗನ ಮನೆಗೆ ಹೋಗಿದ್ದರು. ಅವರು 10.30ಕ್ಕೆ ಮನೆಗೆ ಹಿಂದಿರು­ಗಿದಾಗ ಒಳಗಿನಿಂದ ಚಿಲಕ ಹಾಕಿತ್ತು. ಹೀಗಾಗಿ ಅವರು ಮತ್ತೊಬ್ಬ ಮಗನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ನಂತರ ಬಾಗಿಲು ಮುರಿದು ನೋಡಿದಾಗ ಪ್ರಕ­ರಣ ಬೆಳಕಿಗೆ ಬಂದಿದೆ.

‘ಪತ್ನಿ ಸಾವಿನ ನಂತರ ಮಗ ಖಿನ್ನತೆಗೆ ಒಳಗಾಗಿದ್ದ. ತಾನು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆಗಾಗ ಹೇಳುತ್ತಿದ್ದ. ಆ ನೋವಿನಿಂ­ದಲೇ ಆತ ಈ ನಿರ್ಧಾರ ತೆಗೆದು­ಕೊಂಡಿದ್ದಾನೆ’ ಎಂದು ಸರಸ್ವತಿ ಪೊಲೀಸರಿಗೆ ತಿಳಿಸಿದ್ದಾರೆ. ‘ಅವಳಿ ಮಕ್ಕಳು ಎಲ್‌ಕೆಜಿ ಓದುತ್ತಿ­ದ್ದಾರೆ. ಕಾನ್ವೆಂಟ್‌ಗೆ ಕಳುಹಿಸಲು ಅವ­ರನ್ನು ಸಜ್ಜುಗೊಳಿಸಿ ಮತ್ತೊಬ್ಬ ಮಗನ ಮನೆಗೆ ಹೋಗಿದ್ದೆ. ವಾಪಸ್‌ ಬರುವ ವೇಳೆಗೆ ಎಲ್ಲರೂ ಪ್ರಾಣ ಬಿಟ್ಟಿದ್ದರು’ ಎಂದು ಸರಸ್ವತಮ್ಮ ತಿಳಿಸಿದರು. ‘ಆತ್ಮಹತ್ಯೆಗೆ ಯಾರೂ ಕಾರಣರಲ್ಲ. ಈ ನಿರ್ಧಾರಕ್ಕೆ ಕ್ಷಮೆ ಇರಲಿ’ ಎಂದು ಕುಮರೇಶನ್ ಪತ್ರ ಬರೆದಿ­ಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT