ಬೆಂಗಳೂರು: ವ್ಯಕ್ತಿಯೊಬ್ಬರು ತನ್ನ ಅವಳಿ ಮಕ್ಕಳನ್ನು ನೇಣು ಬಿಗಿದು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಾಜಿನಗರ 69ನೇ ಅಡ್ಡರಸ್ತೆಯಲ್ಲಿ ಬುಧವಾರ ನಡೆದಿದೆ.
ಮೂಲತಃ ಕೆಜಿಎಫ್ನವರಾದ ಕುಮರೇಶನ್ (39) ಅವರು ವಿಜೇತಾ ಮತ್ತು ವೇದಿಕಾ ಎಂಬ ನಾಲ್ಕು ವರ್ಷದ ಅವಳಿ ಮಕ್ಕಳಿಗೆ ದುಪ್ಪಟ್ಟಾದಿಂದ ಕುತ್ತಿಗೆ ಬಿಗಿದಿದ್ದಾರೆ. ಅವರು ಸಾವನ್ನಪ್ಪಿದ ನಂತರ ತಾವು ಸಹ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಅವರ ಹಿರಿಯ ಮಗಳು ನೀಸಾ (9), ಕುರುಬರಹಳ್ಳಿಯಲ್ಲಿರುವ ಅತ್ತೆ ಮನೆಯಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಕುಮರೇಶನ್, ಹತ್ತು ವರ್ಷಗಳ ಹಿಂದೆ ಸೋನಿ ಅವರನ್ನು ವಿವಾಹವಾಗಿದ್ದರು. ಗರ್ಭಕೋಶದ ತೊಂದರೆಯಿಂದ ಬಳಲುತ್ತಿದ್ದ ಸೋನಿ, ಮೂರೂವರೆ ತಿಂಗಳ ಹಿಂದೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಿಗ್ಗೆ 10 ಗಂಟೆಗೆ ಕುಮರೇಶನ್ ಅವರ ತಾಯಿ ಸರಸ್ವತಮ್ಮ, ಪಕ್ಕದ ರಸ್ತೆಯಲ್ಲೇ ಇರುವ ಮತ್ತೊಬ್ಬ ಮಗನ ಮನೆಗೆ ಹೋಗಿದ್ದರು. ಅವರು 10.30ಕ್ಕೆ ಮನೆಗೆ ಹಿಂದಿರುಗಿದಾಗ ಒಳಗಿನಿಂದ ಚಿಲಕ ಹಾಕಿತ್ತು. ಹೀಗಾಗಿ ಅವರು ಮತ್ತೊಬ್ಬ ಮಗನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ನಂತರ ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
‘ಪತ್ನಿ ಸಾವಿನ ನಂತರ ಮಗ ಖಿನ್ನತೆಗೆ ಒಳಗಾಗಿದ್ದ. ತಾನು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆಗಾಗ ಹೇಳುತ್ತಿದ್ದ. ಆ ನೋವಿನಿಂದಲೇ ಆತ ಈ ನಿರ್ಧಾರ ತೆಗೆದುಕೊಂಡಿದ್ದಾನೆ’ ಎಂದು ಸರಸ್ವತಿ ಪೊಲೀಸರಿಗೆ ತಿಳಿಸಿದ್ದಾರೆ. ‘ಅವಳಿ ಮಕ್ಕಳು ಎಲ್ಕೆಜಿ ಓದುತ್ತಿದ್ದಾರೆ. ಕಾನ್ವೆಂಟ್ಗೆ ಕಳುಹಿಸಲು ಅವರನ್ನು ಸಜ್ಜುಗೊಳಿಸಿ ಮತ್ತೊಬ್ಬ ಮಗನ ಮನೆಗೆ ಹೋಗಿದ್ದೆ. ವಾಪಸ್ ಬರುವ ವೇಳೆಗೆ ಎಲ್ಲರೂ ಪ್ರಾಣ ಬಿಟ್ಟಿದ್ದರು’ ಎಂದು ಸರಸ್ವತಮ್ಮ ತಿಳಿಸಿದರು. ‘ಆತ್ಮಹತ್ಯೆಗೆ ಯಾರೂ ಕಾರಣರಲ್ಲ. ಈ ನಿರ್ಧಾರಕ್ಕೆ ಕ್ಷಮೆ ಇರಲಿ’ ಎಂದು ಕುಮರೇಶನ್ ಪತ್ರ ಬರೆದಿಟ್ಟಿದ್ದಾರೆ.