ನಿಷ್ಠುರ ಸತ್ಯ ಹೇಳಲು ಹಿಂಜರಿಯದೇ ಸಾಹಿತ್ಯ ಲೋಕದಲ್ಲಿ ಮಹತ್ವದ ಸಂಶೋಧನೆಗಳನ್ನು ಮಾಡಿದ್ದ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಸಾವಿನ ಹಿಂದಿನ ಕೈಗಳು ಯಾವುವು ಎಂಬುದು ಬಯಲಾಗಬೇಕು.
ಆದರೆ, ಇನ್ನೂ ತನಿಖೆಯೇ ಆರಂಭವಾಗದಿರುವಾಗ, ಚಿಂತಕರ ಒಂದು ವರ್ಗ ಈಗಾಗಲೇ ಕಲಬುರ್ಗಿ ಅವರ ಸಾವಿಗೆ ಮೂಲಭೂತವಾದಿ ಶಕ್ತಿಗಳೇ ಕಾರಣ ಎಂಬ ಅವಸರದ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಇಂಥ ನಿಲುವನ್ನು ಕಲಬುರ್ಗಿ ಅವರೇ ಒಪ್ಪುತ್ತಿರಲಿಲ್ಲವೇನೊ.
ಚಿಂತಕರಾದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ, ಪರಿಸರ ಹೋರಾಟಗಾರ್ತಿ ಶೆಹ್ಲಾ ಮಸೂದ್ ಹತ್ಯೆ ಪ್ರಕರಣಗಳು ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಕಲಬುರ್ಗಿ ಅವರ ಸಾವೂ ಇದೇ ಸಾಲಿಗೆ ಸೇರಬಾರದು.