ಬೆಂಗಳೂರು: ಬೆಂಗಳೂರು ದಕ್ಷಿಣ ಭಾಗದಿಂದ ವಿಧಾನಸೌಧಕ್ಕೆ ಸಂಚರಿಸುವ ಬಿಎಂಟಿಸಿ ಬಸ್ಗಳು ಗುರುವಾರದಿಂದ ಅವೆನ್ಯೂ ರಸ್ತೆ ಮೂಲಕ ಪ್ರಾಯೋಗಿಕ ಸಂಚಾರ ಆರಂಭಿಸಿವೆ.ಪ್ರತಿದಿನ ಬೆಳಿಗ್ಗೆ ಪುರಭವನ, ಬಿಬಿಎಂಪಿ ಬಳಿ ಆಗುತ್ತಿರುವ ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ಬಿಎಂಟಿಸಿ ಈ ಪರ್ಯಾಯ ವ್ಯವಸ್ಥೆ ಮಾಡಿದೆ.
ಇದುವರೆಗೂ ಬೆಂಗಳೂರು ದಕ್ಷಿಣ ಭಾಗದಿಂದ ಕೆ.ಆರ್.ಮಾರ್ಕೆಟ್, ಪುರಭವನ, ಬಿಬಿಎಂಪಿ ಹಾಗೂ ಕಾವೇರಿ ಭವನದ ಮೂಲಕ ವಿಧಾನಸೌಧಕ್ಕೆ ತೆರಳುತ್ತಿದ್ದವು. ಈಗ ಕೆ.ಆರ್.ಮಾರ್ಕೆಟ್ ಮೂಲಕ ನೇರವಾಗಿ ಅವೆನ್ಯೂ ರಸ್ತೆ ಹಾಗೂ ಮೈಸೂರು ಬ್ಯಾಂಕ್ ಮಾರ್ಗವಾಗಿ ವಿಧಾನಸೌಧಕ್ಕೆ ತೆರಳುತ್ತಿವೆ. ಸಂಚಾರ ಪೊಲೀಸರ ನೆರವಿನಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ವಿಧಾನಸೌಧ ಕಡೆಗೆ ಪ್ರಯಾಣಿಸುವ ಸಾರ್ವಜನಿಕರು ಕಡಿಮೆ ಅವಧಿಯಲ್ಲಿ ಕಚೇರಿ ತಲುಪಬಹುದು ಎಂದು ಬಿಎಂಟಿಸಿ ತಿಳಿಸಿದೆ.
ಬಸ್ ಸಮಯ: ಎನ್.ಆರ್.ಕಾಲೊನಿಯಿಂದ ಬೆಳಿಗ್ಗೆ 9.35, 9.20, ತ್ಯಾಗರಾಜನಗರದಿಂದ ಬೆಳಿಗ್ಗೆ 9.30, ಎಜಿಎಸ್ ಬಡಾವಣೆಯಿಂದ ಬೆಳಿಗ್ಗೆ 8.45, ವಿದ್ಯಾಪೀಠ ಸರ್ಕಲ್ನಿಂದ ಬೆಳಿಗ್ಗೆ 9.30ಕ್ಕೆ ಬಸ್ಗಳು ಹೊರಡಲಿವೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಬಸ್: ಬಿಎಂಟಿಸಿಯು ಮೆಜೆಸ್ಟಿಕ್, ಸ್ವಾತಂತ್ರ್ಯ ಉದ್ಯಾನ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ, ಕೆ.ಆರ್.ಮಾರುಕಟ್ಟೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಅಭಿನಯ ಚಿತ್ರಮಂದಿರದ ಮಾರ್ಗವಾಗಿ ಮೆಜೆಸ್ಟಿಕ್ಗೆ ಮೇ 25ರಿಂದ ಹೊಸ ಮಾರ್ಗ ಪರಿಚಯಿಸಿದೆ. ಎರಡು ಬಸ್ಗಳು 30 ನಿಮಿಷದ ಅಂತರದಲ್ಲಿ ಬೆಳಿಗ್ಗೆ 7.50ರಿಂದ ರಾತ್ರಿ 7.50ರ ವರೆಗೆ 20 ಟ್ರಿಪ್ ಮಾಡಲಿವೆ. ಈ ಮಾರ್ಗದಲ್ಲಿ ಪ್ರಯಾಣಿಕರ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದರೆ ಬಸ್ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.