ಕಾಬೂಲ್ (ಎಎಫ್ಪಿ,ಐಎಎನ್ಎಸ್): ಆಫ್ಘಾನಿಸ್ತಾನದ ಮುಂದಿನ ಅಧ್ಯಕ್ಷರಾಗಿ ಆರ್ಥಿಕ ತಜ್ಞ ಅಶ್ರಫ್ ಘನಿ ಅಹಮದ್ಜಾಯಿ ಅವರು ಆಯ್ಕೆ ಆಗಿರುವುದಾಗಿ ಚುನಾವಣಾ ಆಯೋಗ ಭಾನುವಾರ ಪ್ರಕಟಿಸಿದೆ.
ಸಂಜೆ ಫಲಿತಾಂಶ ಘೋಷಿಸಿದ ಚುನಾವಣಾ ಆಯೋಗದ ಮುಖ್ಯಸ್ಥ ಅಹಮದ್ ಯೂಸಫ್ ನೂರಿಸ್ತಾನಿ ಅವರು, ಗೆಲುವಿನ ಅಂತರ ಅಥವಾ ಮತದಾನದ ಪ್ರಮಾಣವನ್ನು ತಿಳಿಸಲಿಲ್ಲ.
ಕಳೆದ ಜೂನ್ 14ರಂದು ನಡೆದ ಅಂತಿಮ ಹಂತದ ಅಧ್ಯಕ್ಷೀಯ ಚುನಾವಣೆಯಲ್ಲಿ ಘನಿ ಅವರು ಪ್ರತಿಸ್ಪರ್ಥಿಯಾಗಿದ್ದ ಮಾಜಿ ವಿದೇಶಾಂಗ ಸಚಿವ ಡಾ. ಅಬ್ದುಲ್ಲಾ ಅಬ್ದುಲ್ಲಾ ಅವರಿಗಿಂತ ಮುಂದಿದ್ದರು. ಈ ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂಬ ಆರೋಪಗಳ ಕಾರಣ ಫಲಿತಾಂಶ ಪ್ರಕಟಿಸದೆ, ತಡೆಹಿಡಿಯಲಾಗಿತ್ತು.
ಡಾ. ಅಬ್ದುಲ್ಲಾ ಒಪ್ಪಿಗೆ: ಈ ರಾಜಕೀಯ ಬಿಕ್ಕಟ್ಟು ಕೊನೆಗೊಳಿಸಲು ಇಬ್ಬರೂ ಸ್ಪರ್ಧಿಗಳ ಮಧ್ಯೆ ಸತತ ಸಂಧಾನ ನಡೆಸಲಾಯಿತು. ಇದರ ಫಲವಾಗಿ ಭಾನುವಾರ ಬೆಳಿಗ್ಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಯ ಒಪ್ಪಂದಕ್ಕೆ ಬಂದು, ಅಬ್ದುಲ್ಲಾ ಮತ್ತು ಅಶ್ರಫ್ ಘನಿ ಅವರು ಅಧಿಕಾರ ಹಂಚಿಕೆಗೆ ಸಹಿ ಹಾಕಿದರು.
ಈ ಮೂಲಕ ಇಬ್ಬರೂ ನಾಯಕರು ದೇಶದಲ್ಲಿ ಸುಮಾರು ಕೆಲವು ತಿಂಗಳ ಕಾಲ ಇದ್ದಂತಹ ರಾಜಕೀಯ ಅನಿಶ್ಚತೆತೆ ಯನ್ನು ಕೊನೆಗೊಳಿಸಲು ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದರು.
ಅಧ್ಯಕ್ಷರ ಅರಮನೆಯಲ್ಲಿ ನಿರ್ಗಮಿತ ಅಧ್ಯಕ್ಷ ಹಮೀದ್ ಕರ್ಜೈ ಅವರ ಸಮ್ಮುಖದಲ್ಲಿ ಮಾಜಿ ಮುಜಾಹಿದೀನ್ ನಾಯಕರು ಮತ್ತು ಉನ್ನತ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಉಭಯ ನಾಯಕರ ಮಧ್ಯೆ ಸುದೀರ್ಘ ಚರ್ಚೆ ಬಳಿಕ ಈ ಒಪ್ಪಂದಕ್ಕೆ ಬರಲಾಯಿತು ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಒಪ್ಪಂದ ಪ್ರಕಾರ, ಹೊಸ ರಾಷ್ಟ್ರೀಯ ಸರ್ಕಾರದಲ್ಲಿ ಇಬ್ಬರು ಅಭ್ಯರ್ಥಿಗಳ ಪೈಕಿ ಒಬ್ಬರು ಅಧ್ಯಕ್ಷರಾಗಬೇಕು ಮತ್ತು ಇನ್ನೊಬ್ಬರು ಅಥವಾ ಅವರು ಸೂಚಿಸಿದ ಬೆಂಬಲಿಗರೊಬ್ಬರು ಪ್ರಧಾನಿ ಹುದ್ದೆಗೆ ಸಮಾನಾದಂತಹ ಹೊಸದಾಗಿ ಸೃಷ್ಟಿಸುವ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಒಇ) ಸ್ಥಾನಕ್ಕೇರಬೇಕು. ಈಗ ಘನಿ ಅವರನ್ನು ಅಧ್ಯಕ್ಷರಾಗಿ ಪ್ರಕಟಿಸಿರುವುದರಿಂದ ಅಬ್ದುಲ್ಲಾ ಅಥವಾ ಅವರ ಬೆಂಬಲಿಗರು ಸಿಇಒ ಆಗಲಿದ್ದಾರೆ.
ಆಫ್ಘನ್ನಲ್ಲಿ ತಾಲಿಬಾನ್ ಆಡಳಿತ ಕೊನೆಗೊಂಡ ನಂತರ ಕಳೆದ ಏಪ್ರಿಲ್ 5ರಂದು ನಡೆದ ಮೂರನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಎಂಟು ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಅಗತ್ಯದ ಶೇ 50ಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಲು ಸಫಲರಾಗಿರಲಿಲ್ಲ. ಹಾಗಾಗಿ ಇಬ್ಬರು ಮುಂಚೂಣಿ ಅಭ್ಯರ್ಥಿಗಳಾದ ಮಾಜಿ ವಿದೇಶಾಂಗ ಸಚಿವ ಡಾ. ಅಬ್ದುಲ್ಲಾ ಮತ್ತು ಆರ್ಥಿಕ ತಜ್ಞ ಅಶ್ರಫ್ ಘನಿ ಅವರ ನಡುವೆ ಜೂನ್ 14ರಂದು ಮತ್ತೆ ನೇರ ಚುನಾವಣೆ ನಡೆದಿತ್ತು.
ಈ ಚುನಾವಣೆಯಲ್ಲಿ ಸಾಕಷ್ಟು ಅಕ್ರಮದ ಆರೋಪ ಕೇಳಿಬಂದಿತ್ತು. ಇಬ್ಬರೂ ತೀವ್ರ ಪೈಪೋಟಿ ಎದುರಿಸಿ, ತಾವೇ ಗೆಲುವು ಸಾಧಿಸಿರುವುದಾಗಿ ಹೇಳಿಕೊಂಡಿದ್ದರಿಂದ ಕೊನೆಗೆ ಒಮ್ಮತದ ಒಕ್ಕೂಟ ಸರ್ಕಾರ ರಚನೆಗೆ ಮುಂದಾಗಲಾಗಿದೆ.
ಮತೀಯವಾದಿ ತಾಲಿಬಾನ್ ಆಡಳಿತದ ವಿರುದ್ಧ ಅಮೆರಿಕ ನೇತೃತ್ವದ ವಿದೇಶಿ ಸಮ್ಮಿಶ್ರ ನ್ಯಾಟೊ ಪಡೆಗಳು 13 ವರ್ಷಗಳ ಕಾಲ ಹೋರಾಡಿ, ಆಫ್ಘನ್ನಿಂದ ಕಾಲ್ತೆಗೆಯಲು ನಿರ್ಧರಿಸಿರುವ ಕಾರಣ ಹೊಸ ಒಕ್ಕೂಟ ಸರ್ಕಾರದ ಮೇಲೆ ಹೆಚ್ಚಿನ ಹೊಣೆಗಾರಿಕೆ ಬಿದ್ದಿದೆ. ಅಧ್ಯಕ್ಷ ಕರ್ಜೈ ಕೂಡ ದೇಶದಲ್ಲಿ ವಿದೇಶಿ ಸೇನೆ ಮುಂದುವರಿಸುವುದಕ್ಕೆ ಒಪ್ಪಿಲ್ಲ.
1990ರ ಅಂತಃಕಲಹ ಮರುಕಳಿಸಿ, ಜನಾಂಗೀಯ ವಿಭಜನೆ ಆಗುವುದನ್ನು ತಡೆಯಲು ವಿಶ್ವಸಂಸ್ಥೆಯು ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಯ ಪ್ರಸ್ತಾವ ಮುಂದಿಟ್ಟಿತು. ಇದನ್ನು ಅಮೆರಿಕ ಸಹ ಬೆಂಬಲಿಸಿತು.
ಪ್ರಸಕ್ತ ಸಂವಿಧಾನದ ಪ್ರಕಾರ, ಅಧ್ಯಕ್ಷರೇ ಬಹುತೇಕ ಅಧಿಕಾರ ಹೊಂದಿದ್ದು, ಹೊಸ ಸರ್ಕಾರದ ಅಧಿಕಾರ ವ್ಯಾಪ್ತಿ ಅಗ್ನಿ ಪರೀಕ್ಷೆಗೆ ಒಳಪಡಲಿದೆ. ದೇಶದ ಭದ್ರತೆ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆ ಇದಕ್ಕೆ ಸವಾಲಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.