ಹುಮನಾಬಾದ್: ಇಲ್ಲಿನ ನಿವಾಸಿಗಳು ಅಸಮರ್ಪಕ ನೀರು ಪೂರೈಕೆಯಿಂದಾಗಿ ಕಳೆದ ಒಂದು ತಿಂಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಾರಂಜಾ ಜಲಾಶಯದ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡ ಆರಂಭದಲ್ಲಿ ನಿತ್ಯ ನೀರು ಪೂರೈಕೆ ಆಗುತ್ತಿತ್ತು. ಐದು ವರ್ಷದಿಂದ ಜೂನ್ ಅಂತ್ಯದವರೆಗೂ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿತ್ತು. ನೀರನ್ನು ಮಿತವಾಗಿ ಬಳಸಿ, ನಿವಾಸಿಗಳು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು. ಆದರೆ ಜುಲೈನಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ಪೂರೈಸುತ್ತಿರುವ ಕಾರಣ ನಾಗರಿಕರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ನೀರಿನ ಸಮಸ್ಯೆ ಕಾರಣ ಮಧ್ಯಮ ವರ್ಗದವರು ದೂರದ ತೋಟಗಳ ಮೊರೆ ಹೋಗುತ್ತಿದ್ದಾರೆ. ವಿದ್ಯಾರ್ಥಿಗಳು ಕಾಲೇಜು ತೊರೆದು ಬೈಸಿಕಲ್ ಮೇಲೆ ನೀರು ತರುತ್ತಿದ್ದಾರೆ. ಉಳ್ಳವರು ನಿತ್ಯ ₨ 50ಕ್ಕೆ 200 ಲೀಟರ್ನಂತೆ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಪಟ್ಟಣದ ಶಿವನಗರ ಮೊದಲಾದ ಹೊಸ ಬಡಾವಣೆಗಳಲ್ಲಿ ಕೊಳವೆ ಹಾಗೂ ತೆರೆದ ಬಾವಿ ನೀರು ಸಂಪೂರ್ಣ ಬತ್ತಿಹೋದ ಕಾರಣ ನೀರು ಖರೀದಿಸಲು ಆಗದವರು ಬಾಡಿಗೆ ಮನೆ ತೊರೆದಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಬಿಸಿಯೂಟ ನೀಡಲೇಬೇಕು. ನೀರಿಲ್ಲದೇ ಅದೆಷ್ಟೋ ಸರ್ಕಾರಿ ಶಾಲೆ ಸಿಬ್ಬಂದಿಗೆ ಅಡುಗೆ ಸಿದ್ಧಪಡಿಸುವುದು ತಲೆನೋವಾಗಿ ಪರಿಣವಿಸಿದೆ. ಖಾಸಗಿ ಶಾಲೆಯವರು ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಹುಮನಾಬಾದ್ನಲ್ಲಿ 45 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕ್ಷೇತ್ರದ ಶಾಸಕ ಪಾಟೀಲ, ಕಾರಂಜಾ ಜಲಾಶಯ ಯೋಜನೆಯಿಂದ 2008– 09ನೇ ಸಾಲಿನಲ್ಲಿ ನೀರು ಪೂರೈಸಲು ಕ್ರಮಕೈಗೊಂಡಿದ್ದರು.
ಈಗ ಅಂತರ್ಜಲ ಬರಿದಾದ ಕಾರಣ ಸಮಸ್ಯೆ ಹೆಚ್ಚಿದೆ. ಕಾರಂಜಾ ಶಾಶ್ವತ ಕುಡಿಯುವ ನೀರು ಯೋಜನೆಯಿಂದ ಆರಂಭದಲ್ಲಿ ಹುಮನಾಬಾದ್ ಮಾತ್ರ ಪ್ರಯೋಜನ ಪಡೆದಿತ್ತು. ನಂತರ ಬೀದರ್ ಹಾಗೂ ಭಾಲ್ಕಿ ಸೇರ್ಪಡೆಯಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಸಮಸ್ಯೆ ಬಗೆಹರಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಪುರಸಭೆ ಅಧ್ಯಕ್ಷ ಅಪ್ಸರಮಿಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.