ಪ್ರಾಮಾಣಿಕತೆಯ ಕಾಪಿರೈಟ್ ಪಡೆದಿರುವ ಏಕೈಕ ವ್ಯಕ್ತಿಯಂತೆ ಪೋಸು ಕೊಡುತ್ತಿರುವ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಹಾಗೂ ಅವರ ಸಂಗಾತಿಗಳು ದಿನಕ್ಕೊಂದು ವಿವಾದ ಸೃಷ್ಟಿಸುತ್ತಿದ್ದಾರೆ. ಇದನ್ನು ನೋಡಿದವರಿಗೆ ಇವರನ್ನು ಭಾರಿ ಬಹುಮತದಿಂದ ಅಧಿಕಾರಕ್ಕೆ ತಂದ ದಿಲ್ಲಿಯ ಜನರ ಬಗೆಗೆ ‘ಅಯ್ಯೋ ಪಾಪ’ ಎಂಬ ಉದ್ಗಾರ ಹೊರಡುವುದು ಸಹಜ.
ಕೊಟ್ಟ ಭರವಸೆಗಳನ್ನು ಈಡೇರಿಸಲಿಕ್ಕಾಗದ ಎಎಪಿಯು ಕೇಂದ್ರ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ಸಂಘರ್ಷಕ್ಕೆ ಇಳಿದು ಜನಬೆಂಬಲಕ್ಕೆ ಎರವಾಗುತ್ತಿದೆ. ‘ನಕಲಿ ಡಿಗ್ರಿ’ಯ ಜಿತೇಂದ್ರ ಸಿಂಗ್ ತೋಮರ್, ಕೌಟುಂಬಿಕ ದೌರ್ಜನ್ಯದ ಆರೋಪ ಹೊತ್ತಿರುವ ಸೋಮನಾಥ್ ಭಾರ್ತಿ ಅಂಥವರ ‘ಮಾದರಿ’ಗಳನ್ನು ಇಟ್ಟುಕೊಂಡು ಈ ಪಕ್ಷವು ಸತ್ಯ ಹರಿಶ್ಚಂದ್ರನ ಪಾತ್ರ ಮಾಡಲು ಸಾಧ್ಯವೇ?