ಬಿಜೆಪಿಯಲ್ಲಿ ಈಚೆಗೆ ಜರುಗುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಸರ್ವಾಧಿಕಾರಿಯೊಬ್ಬ ಒಡಮೂಡುತ್ತಿದ್ದಾನೇನೊ? ಎಂಬ ಶಂಕೆ ಮೂಡುತ್ತದೆ. ಆ ಪಕ್ಷದ ಸಂಸದೀಯ ಮಂಡಳಿಯಿಂದ ಪಕ್ಷದ ಅತ್ಯಂತ ಹಿರಿಯರಾದ ಎ.ಬಿ.ವಾಜಪೇಯಿ, ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಕೈಬಿಟ್ಟಿರುವುದೇ ಇದಕ್ಕೆ ಸಾಕ್ಷಿ.
ವಾಜಪೇಯಿಯವರು ಅನಾರೋಗ್ಯದಿಂದಾಗಿ ಪಕ್ಷದ ಚಟುವಟಿಕೆಗಳಿಂದ ಮತ್ತು ಸಾರ್ವಜನಿಕ ಜೀವನದಿಂದ ದೂರವಿರುವುದರಿಂದ ಅವರನ್ನು ಕೈಬಿಟ್ಟಿರುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಅಡ್ವಾಣಿ ಮತ್ತು ಜೋಷಿಯವರು ಹಾಲಿ ಸಂಸತ್ ಸದಸ್ಯರು, ಈಗಲೂ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. ಇಂತಹ ಹಿರಿಯರನ್ನು ವಯಸ್ಸಿನ ಕಾರಣದ ನೆಪದಡಿ ಸಂಸದೀಯ ಮಂಡಳಿಯಿಂದ ಹೊರಗಿಟ್ಟಿರುವುದು ಆರೋಗ್ಯಕರ ಬೆಳವಣಿಗೆ ಅಲ್ಲ.
75 ವರ್ಷ ವಯಸ್ಸು ಮೀರಿದ ನಾಯಕರನ್ನು ಸಂಸದೀಯ ಮಂಡಳಿಯಿಂದ ಕೈ ಬಿಡಬೇಕು ಎಂಬ ನೀತಿಯೇ ಅಸಂಬದ್ಧ. ಇದಕ್ಕೆ ಸಂಘ ಪರಿವಾರದ ನಾಯಕರೂ ಸಮ್ಮತಿಸಿರುವುದು ಭಾರತೀಯ ಸಂಸ್ಕೃತಿಯ ಸಂಕೇತ ಎಂದು ಹೇಳಿಕೊಳ್ಳುವ ಆ ಸಂಘಟನೆಗೆ ಶೋಭೆ ತರುವುದಿಲ್ಲ. ವಯಸ್ಸಿನ ಮಿತಿಯನ್ನು ಈಚೆಗೆ ನಡೆದ ಚುನಾವಣೆಗೆ ಟಿಕೆಟ್ ನೀಡುವಾಗಲೇ ಅನುಸರಿಸಿದ್ದರೆ ಚೆನ್ನಾಗಿತ್ತೇನೋ! ಇದು ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರು ಪಕ್ಷವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಸ್ಪಷ್ಟ ಸಂಕೇತ.
ಆ ಹಿರಿಯರೊಂದಿಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಪಕ್ಕಕ್ಕೆ ಸರಿದು ನಿಂತವರು ಅಡ್ವಾಣಿ. ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿಗೆ ಅಡ್ವಾಣಿ ಮತ್ತು ಜೋಷಿ ಅಂಥವರ ಮಾರ್ಗದರ್ಶನ ಸಂಸದೀಯ ಮಂಡಳಿಯಲ್ಲಿ ಅವಶ್ಯ. ‘ನನ್ನ ನಾಮಬಲದಿಂದಲೇ ಪಕ್ಷ ಅಧಿಕಾರಕ್ಕೆ ಬಂದಿರುವುದು, ನಾನೊಬ್ಬನೇ ಇಲ್ಲಿ ಪ್ರಶ್ನಾತೀತ ನಾಯಕ’ನೆಂಬ ಧೋರಣೆ ಮೋದಿಯವರಲ್ಲಿ ಮೂಡಿದರೆ ಅದು ಅವನತಿಯ ದಾರಿಯನ್ನೂ ಹಿಡಿಯಬಹುದು.
–ರಾಘವೇಂದ್ರರಾವ್ ದೇಸಾಯಿ, ಕುರುಗೋಡು, ಬಳ್ಳಾರಿ ಜಿಲ್ಲೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.