ಭುವನೇಶ್ವರ (ಪಿಟಿಐ): ಉತ್ತರ ಅಂಡಮಾನ್ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಬುಧವಾರ ‘ಹುಡ್ಹುಡ್’ ಚಂಡಮಾರುತವಾಗಿ ಮಾರ್ಪಾಡಾಗಿದ್ದು, ಅ.12ರಂದು ಆಂಧ್ರಪ್ರದೇಶದ ಉತ್ತರ ಮತ್ತು ಒಡಿಶಾದ ದಕ್ಷಿಣ ಕರಾವಳಿ ಹಾದುಹೋಗಲಿದೆ.
‘ಉತ್ತರ ಅಂಡಮಾನ್ ಸಮುದ್ರದಲ್ಲಿ ಹುಡ್ಹುಡ್ ಕೇಂದ್ರವಿದ್ದು, ಬಂಗಾಳಕೊಲ್ಲಿಯ ವಾಯವ್ಯ ಭಾಗವನ್ನು ಪ್ರವೇಶಿಸುತ್ತಿದೆ. ಚಂಡಮಾರುತದ ಕೇಂದ್ರವು ಒಡಿಶಾದ ದಕ್ಷಿಣ ಕರಾವಳಿಯ ಗೋಪಾಲಪುರದಿಂದ 1,150 ಕಿ.ಮೀ ದೂರದಲ್ಲಿದೆ’ ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತವು ಈಗ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಹಾದುಬರುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಅದರ ರಭಸ ತೀವ್ರಗೊಳ್ಳಲಿದೆ. ಅ.12ರ ಮಧ್ಯಾಹ್ನದ ಹೊತ್ತಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಒಡಿಶಾದ ಗೋಪಾಲಪುರದ ನಡುವಣ ಕರಾವಳಿಯನ್ನು ಪ್ರವೇಶಿಸಲಿದೆ. ಚಂಡಮಾರುತದ ಪರಿಣಾಮ ಮುಂದಿನ 24 ಗಂಟೆಗಳಲ್ಲಿ ಒಡಿಶಾದ ಕೆಲವು ಭಾಗಗಳಲ್ಲಿ ಹಾಗೂ ಆಧ್ರಪ್ರದೇಶದ ಉತ್ತರ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಳೆಯೊಂದಿಗೆ 100 ರಿಂದ 140 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿರುವವರು ಶೀಘ್ರವೇ ಹಿಂತಿರುಗುವಂತೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಕರಾವಳಿಯಿಂದ ಜನರನ್ನು ತೆರವುಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಗೃಹಕಚೇರಿಯ ಮೂಲಗಳು ತಿಳಿಸಿವೆ.
ಎದುರಿಸಲು ಸಕಲ ಸಿದ್ಧತೆ
ಭಾನುವಾರದ ಹೊತ್ತಿಗೆ ಹುಡ್ಹುಡ್ ಚಂಡಮಾರುತ ಒಡಿಶಾ ಕರಾವಳಿಯನ್ನು ಅಪ್ಪಳಿಸಲಿದ್ದು ರಾಜ್ಯ ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದೆ.
ಕಳೆದ ವರ್ಷ ‘ಫೈಲಿನ್’ ಚಂಡಮಾರುತ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯಲ್ಲಿಯೇ ಈ ಬಾರಿಯೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಯಾವುದೇ ಸಾವು ನೋವು ಸಂಭವಿಸಬಾರದು ಎಂಬ ಗುರಿಯನ್ನು ಹಾಕಿಕೊಳ್ಳಲಾಗಿದೆ.
‘ಯಾವುದೇ ಸಾವು ನೋವು ಸಂಭವಿಸದಂತೆ ನೋಡಿಕೊಳ್ಳಲು ಸರ್ಕಾರ ಶ್ರಮಿಸಲಿದೆ. ಸನ್ನದ್ಧರಾಗಿರಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜನರ ತೆರವು ಯೋಜನೆ ಸಿದ್ಧಪಡಿಸುವಂತೆ ಮತ್ತು ಹೆಚ್ಚಿನ ಅಪಾಯ ಎದುರಿಸುತ್ತಿರುವ ಗ್ರಾಮಗಳಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ’ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಕಳೆದ ವರ್ಷ ಭಾರಿ ಚಂಡಮಾರುತ ‘ಫೈಲಿನ್’ ಅಪ್ಪಳಿಸಿದಾಗ ರಾಜ್ಯ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಿಗೆ ಜಾಗತಿಕ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು.
ರಾಜ್ಯ ಸರ್ಕಾರ ಎಲ್ಲ ಸಿಬ್ಬಂದಿಯ ರಜೆಗಳನ್ನು ರದ್ದುಪಡಿಸಿದ್ದು, ವಿವಿಧ ಇಲಾಖೆಗಳು ನಿಯಂತ್ರಣ ಕೊಠಡಿಗಳನ್ನು ಆರಂಭಿಸಿವೆ. ಇವು ದಿನದ 24 ತಾಸು ಕಾರ್ಯನಿರ್ವಹಿಸಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.