ಹೈದರಾಬಾದ್: ಆಂಧ್ರಪ್ರದೇಶದ ಕರಾವಳಿ ಮತ್ತು ತೆಲಂಗಾಣದ ಕೆಲವು ಜಿಲ್ಲೆಗಳಲ್ಲಿ ಅಕಾಲಿಕವಾದ ಬಿಸಿ ಗಾಳಿ ವಾತಾವರಣ ಕಾಣಿಸಿಕೊಂಡಿದ್ದು, ಬುಧವಾರದಿಂದ ಅನ್ವಯಿಸುವಂತೆ 48 ಗಂಟೆ ಕಾಲ ಮುಂದುವರಿಯುವ ಸಾಧ್ಯತೆ ಇರುವುದರಿಂದ ಅನೇಕ ಭಾಗಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೆಲವೆಡೆ ಶಾಲೆಗಳು ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಆಂಧ್ರದ ಕೃಷ್ಣಾ, ಗುಂಟೂರು, ಪೂರ್ವ ಮತ್ತು ಪಶ್ಚಿಮ ಗೋದಾವರಿ, ವಿಶಾಖಪಟ್ಟಣ ಮತ್ತು ವಿಜಯನಗರಂ ಹಾಗೂ ತೆಲಂಗಾಣದ ಖಮ್ಮಂ, ಮೆದಕ್, ನಲ್ಗೊಂಡ ಜಿಲ್ಲೆಗಳಲ್ಲಿ ಉಷ್ಣಾಂಶ ವಿಪರೀತ ಹೆಚ್ಚಾಗಿದೆ. ರೇಂಟಚಿಂತಲ ಮತ್ತು ಬಾಪಟ್ಲ ಪಟ್ಟಣಗಳಲ್ಲಿ ಮಂಗಳವಾರ 42 ಮತ್ತು 44 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದರಿಂದ ಈ ತಿಂಗಳ ಅಂತ್ಯದವರೆಗೆ ಶಾಲೆಗಳಿಗೆ ರಜೆ ಘೋಷಿಸಬೇಕಾಗಬಹುದು ಎಂದು ಗುಂಟೂರು ಜಿಲ್ಲಾಧಿಕಾರಿ ವಿನೋದ್ ಕುಮಾರ್ ಹೇಳಿದ್ದಾರೆ. ಈಗಾಗಲೇ ಈ ಜಿಲ್ಲೆಯಲ್ಲಿ ಎರಡು ದಿನಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಬಿಸಿಲ ತಾಪಕ್ಕೆ 16 ಬಲಿ: ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಸಿಲ ತಾಪಕ್ಕೆ 16 ಜನರು ಸಾವನ್ನಪ್ಪಿದ್ದಾರೆ ಎಂದು ರಾಜಮಂಡ್ರಿ ಜಿಲ್ಲಾಧಿಕಾರಿ ನೀತು ಪ್ರಸಾದ್ ಅವರು ತಿಳಿಸಿದ್ದಾರೆ.
‘ಬಿಸಿಲಿನ ತಾಪಕ್ಕೆ ಚರ್ಮ ಸುಟ್ಟಿರುವ ಮತ್ತು ಇನ್ನಿತರ ಲಕ್ಷಣಗಳು ಜನರಲ್ಲಿ ಕಾಣಿಸುತ್ತಿವೆ. ಇದು ಮಕ್ಕಳು ಮತ್ತು ವೃದ್ಧರಲ್ಲಿ ಹೆಚ್ಚಾಗಿ ಕಂಡುಬಂದಿದೆ’ ಎಂದು ಗುಂಟೂರು ಜಿಲ್ಲಾಸ್ಪತ್ರೆಯ ವೈದ್ಯ ವಿಜಯಸಾರಥಿ ಹೇಳಿದ್ದಾರೆ.