ಹೈದರಾಬಾದ್ (ಪಿಟಿಐ): ಆಂಧ್ರ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಹಲವು ಪ್ರಮುಖ ರಾಜಕಾರಣಿಗಳು ಆಯ್ಕೆಯಾಗಿದ್ದಾರೆ.
ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿದವರೂ ಇದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದ ಅವರು ಇದೀಗ ಟಿಡಿಪಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಟಿ. ರಾಮ್ ರಾವ್ ಮತ್ತು ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸಚಿವರಾಗಿದ್ದ ಟಿಡಿಪಿ ಹಿರಿಯ ಮುಖಂಡರಾದ ಕಿಮಿದಿ ಕಲ್ಲವೆಂಕಟ್ ರಾವ್, ಕೊಡೆಲಾ ಶಿವಪ್ರಸಾದ್ ರಾವ್, ಅಯ್ಯನ್ನಪತ್ರುಡು, ಬಂಡಾರು ಸತ್ಯನಾರಾಯಣ ಮೂರ್ತಿ ಅವರು ಈ ಬಾರಿ ಶಾಸಕರಾಗಿ ಆರಿಸಿ ಬಂದಿದ್ದಾರೆ.
ಟಿಡಿಪಿಯ ಗೊರಂಟ್ಲಾ ಬಚ್ಚಯ್ಯ ಚೌಧರಿ ಅವರಿಗೆ ಈ ಚುನಾವಣೆ ಅದೃಷ್ಟದ ಬಾಗಿಲು ತೆರೆದಿದೆ. ಬಿಜೆಪಿ ಜೊತೆಗೆ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಆರಂಭದಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ, ಅಂತಿಮವಾಗಿ ಅವರಿಗೆ ರಾಜಮಂಡ್ರಿ ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲಾಯಿತು. ಅಲ್ಲಿ ಅವರು ಗೆಲುವಿನ ನಗೆ ಬೀರಿದ್ದಾರೆ.