ಹೈದರಾಬಾದ್ (ಪಿಟಿಐ): ತೆಲಂಗಾಣ ರಾಜ್ಯದ ಉದಯಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿರುವಾಗಲೇ ಸರ್ಕಾರಿ ಕಚೇರಿಗಳ ಕಟ್ಟಡ ವಿಂಗಡಣೆ ಸೇರಿದಂತೆ ಬಹುತೇಕ ಸಿದ್ಧತೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ.
ಆಡಳಿತ ಯಂತ್ರ ಮತ್ತು ಕಲಾಪಗಳನ್ನು ನಡೆಸಲು ಎರಡೂ ರಾಜ್ಯಗಳಿಗೆ ಕಟ್ಟಡಗಳನ್ನು ನೀಡಲಾಯಿತು. ತೆಲಂಗಾಣ ರಾಜ್ಯಕ್ಕೆ ಹೊಸ ವಿಧಾನ-ಸಭೆ ಕಟ್ಟಡವನ್ನೂ ಹಾಗೂ ಹಳೆಯ ಕಟ್ಟಡವನ್ನು ಆಂಧ್ರಪ್ರದೇಶದ ಉಪಯೋಗಕ್ಕೆ ನೀಡಲಾಗಿದೆ.
ವಿಧಾನ ಪರಿಷತ್ ಕಟ್ಟಡವನ್ನು ಆಂಧ್ರಕ್ಕೂ ಜ್ಯುಬಿಲಿ ಹಿಲ್ ಸಭಾಂಗಣವನ್ನು ತೆಲಂಗಾಣಕ್ಕೆ ನೀಡುವ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ಕೆ. ಮೊಹಾಂತಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ದಿವಂಗತ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅಧಿಕಾರಾವಧಿಯಲ್ಲಿ ಬೇಗಂಪೇಟ್ ಪ್ರದೇಶದಲ್ಲಿ ನಿರ್ಮಿಸಲಾದ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ತೆಲಂಗಾಣ ಪಾಲಾಗಲಿದೆ.
ಹೈದರಾಬಾದ್ ನಿಜಾಮ್ ಆಡಳಿತದಲ್ಲಿ ನಿರ್ಮಿಸಲಾದ ಸುಂದರ ಲೇಕ್ವ್ಯೂ ಅತಿಥಿಗೃಹದಲ್ಲಿ ಆಂಧ್ರದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಂಗಲಿದ್ದಾರೆ.
ಜೂನ್ 2ರಿಂದ ಅಸ್ತಿತ್ವಕ್ಕೆ ಬರಲಿರುವ ಎರಡೂ ರಾಜ್ಯಗಳಿಗೂ ಹೈದರಾಬಾದ್ ಮುಂದಿನ ಹತ್ತು ವರ್ಷ ರಾಜಧಾನಿಯಾಗಿರಲಿದೆ.
29ನೇ ರಾಜ್ಯ
ತೆಲಂಗಾಣವು ದೇಶದ 29ನೇ ರಾಜ್ಯವಾಗಿ ಜೂನ್ 2ರಂದು ಅಸ್ತಿತ್ವಕ್ಕೆ ಬರಲಿದೆ.
ಜೂನ್ 2ರಂದೇ ಟಿಆರ್ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ತೆಲಂಗಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಜೂನ್ 8 ಅಥವಾ 9ರಂದು ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನರಸಿಂಹನ್ ಎರಡೂ ರಾಜ್ಯಗಳ ರಾಜ್ಯಪಾಲರಾಗಿ ಅಧಿಕಾರ ನಿಭಾಯಿಸಲಿದ್ದಾರೆ.
ವಿಭಜನೆ ಸುಗಮ ರಾಜ್ಯಪಾಲ ವಿಶ್ವಾಸ
ನವದೆಹಲಿ: ಆಂಧ್ರಪ್ರದೇಶ ವಿಭಜನೆ ಯಾವುದೇ ಅಡ್ಡಿ, ಆತಂಕಗಳಿಲ್ಲದೇ ಸುಗಮವಾಗಿ ನಡೆಯಲಿದೆ ಎಂದು ರಾಜ್ಯಪಾಲ ಇಎಸ್ಎಲ್ ನರಸಿಂಹನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶ ವಿಭಜನೆಯ ಪ್ರಕ್ರಿಯೆ ಕುರಿತು ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿವರಣೆ ನೀಡಿದ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡಿದರು.
‘ಎರಡೂ ರಾಜ್ಯಗಳ ಜನರ ಹಿತವನ್ನು ರಕ್ಷಿಸಲಾಗುವುದು. ಎಲ್ಲರ ಸುರಕ್ಷತೆಗೂ ಆದ್ಯತೆ ನೀಡಲಾಗುವುದು’ ಎಂದು ಅವರು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.