ಕೊಳ್ಳೇಗಾಲ: `ಉತ್ಸವಗಳು ಪ್ರತಿಯೊಬ್ಬರಲ್ಲೂ ನೆಮ್ಮದಿ ಮೂಡಿಸಲಿವೆ, ಸಂಬಂಧ ಬೆಸೆಯಲಿವೆ' ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಮಹದೇವಮ್ಮ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲ್ಲೂಕಿನ ಭರಚುಕ್ಕಿಯಲ್ಲಿ ಆಯೋಜಿಸಿದ್ದ ಜಲಪಾತೋತ್ಸವದ ಕೊನೆ ದಿನ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸದಾ ಜಂಜಾಟದಲ್ಲೇ ತೊಡಗಿರುವ ಮಹಿಳೆಯರು ಮತ್ತು ಮಕ್ಕಳು ಕುಟುಂಬ ಸಮೇತರಾಗಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಕೃತಿ ಸೌಂದರ್ಯ ಸವಿಯುವ ಮಹತ್ವದ ಅವಕಾಶ ಇದಾಗಿದೆ. ಪ್ರತಿವರ್ಷ ಈ ಉತ್ಸವವನ್ನು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ನಡೆಸಲು ಜಿಲ್ಲಾಡಳಿತದ ಜೊತೆ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ಮಕ್ಕಳು, ಯುವಕರು ಹಾಗೂ ಮಹಿಳೆಯರು ಗಾಳಿಪಟ ಹಾರಿಸುವ ಮೂಲಕ ಗಾಳಿಪಟ ಉತ್ಸವಕ್ಕೆ ಕಳೆತಂದರು. ಸೂಕ್ತ ಪ್ರಚಾರದ ಕೊರತೆ ಹಿನ್ನೆಲೆಯಲ್ಲಿ ಗಾಳಿಪಟ ಹಾರಾಟ ಕಡಿಮೆಯಾಗಿತ್ತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ, ಮಾಜಿ ಅಧ್ಯಕ್ಷೆ ಶಶಿಕಲಾ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಜನಾರ್ಧನ, ಉಪ ತಹಶೀಲ್ದಾರ್ ನಂದಕಿಶೋರ್, ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ಕುಮಾರ್, ಮುಖಂಡ ಯಡಕುರಿಯ ಮಹದೇವ ಇತರರು ಹಾಜರಿದ್ದರು.