ಸೂರತ್ (ಪಿಟಿಐ): ಇಲ್ಲಿನ ವಜ್ರಾಭರಣ ರಫ್ತು ಸಂಸ್ಥೆಯೊಂದು ತನ್ನ ಉದ್ಯೋಗಿಗಳಿಗೆ ಪ್ರೋತ್ಸಾಹ ಧನದ ರೂಪದಲ್ಲಿ ಕಾರು, ಮನೆ ಹಾಗೂ ಆಭರಣಗಳನ್ನು ನೀಡುವ ಮೂಲಕ ಗಮನ ಸೆಳೆದಿದೆ.
ರೂ೬,೦೦೦ ಕೋಟಿ ವಹಿವಾಟು ನಡೆಸುವ ಹರಿಕೃಷ್ಣ ಎಕ್ಸ್ಪೋರ್ಟ್ನಲ್ಲಿ ಸುಮಾರು ೧,೨೦೦ ಉದ್ಯೋಗಿಗಳು ಇದ್ದಾರೆ.
ಕಾರು, ಮನೆ, ಆಭರಣ...ಇವುಗಳಲ್ಲಿ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ಕಂಪೆನಿಯ ಅಧ್ಯಕ್ಷ ಸಾವ್ಜಿ ಧೋಲಕಿಯಾ ಅವರು ಉದ್ಯೋಗಿಗಳಲ್ಲಿ ಅಚ್ಚರಿ ಮೂಡಿಸಿದರು. ಸುಮಾರು ೫೦೦ ಉದ್ಯೋಗಿಗಳು ಫಿಯಟ್ ಪುಂಟೊ ಕಾರು, ೫೭೦ ಜನ ಆಭರಣ ಹಾಗೂ ಸುಮಾರು ೨೦೭ ಮಂದಿ ಮನೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
‘ಕೆಲಸಗಾರರ ಮೂಲಕವೇ ನನ್ನೆಲ್ಲ ಕನಸುಗಳು ಸಾಕಾರಗೊಂಡಿವೆ. ಇಡೀ ಹರಿಕೃಷ್ಣ ಕುಟುಂಬಕ್ಕೆ ಇದೊಂದು ಮಹತ್ವದ ದಿನ. ಪ್ರತಿ ಕೆಲಸಗಾರರಿಗೂ ರೂ೩.೬೦ ಲಕ್ಷ ಮೊತ್ತದ ಪ್ರೋತ್ಸಾಹ ಧನ ನೀಡಿರುವ ವಿಶ್ವದ ಮೊಟ್ಟ ಮೊದಲ ಕಂಪೆನಿ ನಮ್ಮದು’ ಎಂದು ಧೋಲಕಿಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.