ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತ ಮಂಡಳಿಯನ್ನು ವಿಸರ್ಜಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಶನಿವಾರ ಅಧಿಕೃತ ಆದೇಶ ಹೊರಡಿಸಿ, ಆಡಳಿತಾಧಿಕಾರಿಯನ್ನು ನೇಮಿಸುವ ಸಾಧ್ಯತೆ ಇದೆ.
ಪಾಲಿಕೆಯ ಅಧಿಕಾರಾವಧಿ ಇದೇ 22ಕ್ಕೆ ಮುಕ್ತಾಯ ಆಗುತ್ತಿತ್ತು. ಅದಕ್ಕೂ ಮೊದಲೇ ಪಾಲಿಕೆಯನ್ನು ವಿಸರ್ಜಿಸುವ ತೀರ್ಮಾನ ಮಾಡಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಬಿಬಿಎಂಪಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಇತ್ತೀಚೆಗೆ ವರದಿ ನೀಡಿದ್ದರು.
ಇದನ್ನೇ ಆಧಾರವಾಗಿ ಇಟ್ಟುಕೊಂಡು ಬಿಬಿಎಂಪಿ ಮೇಯರ್ ಸೇರಿದಂತೆ ಎಲ್ಲ ಸದಸ್ಯರಿಗೂ ನಗರಾಭಿವೃದ್ಧಿ ಇಲಾಖೆ ಕಾರಣ ಕೇಳಿ ಷೋಕಾಸ್ ನೋಟಿಸ್ ನೀಡಿತ್ತು. ಇದಕ್ಕೆ ಸದಸ್ಯರು ಕೊಟ್ಟಿರುವ ಉತ್ತರ ಸಮರ್ಪಕವಾಗಿಲ್ಲ ಎನ್ನುವ ಕಾರಣ ಪೌರ ನಿಗಮಗಳ ಕಾಯ್ದೆ 1976ರ 99ನೇ ಸೆಕ್ಷನ್ ಪ್ರಕಾರ ಪಾಲಿಕೆ ಆಡಳಿತ ಮಂಡಳಿಯನ್ನು ವಿಸರ್ಜಿಸಲು ಸಂಪುಟ ಸಭೆ ತೀರ್ಮಾನಿಸಿತು.
ಪೌರನಿಗಮಗಳ ಕಾಯ್ದೆಯ ಈ ಸೆಕ್ಷನ್ ಪ್ರಕಾರ ಪಾಲಿಕೆಯು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾದ ಸಂದರ್ಭದಲ್ಲಿ ಅದನ್ನು ವಿಸರ್ಜಿಸುವ ಅಧಿಕಾರ ಸರ್ಕಾರಕ್ಕೆ ಇದೆ.