ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದಲ್ಲಿ ಚೀನಾ ಮೂಲದ ಚೆಂಡು ಹೂ ಸಂಸ್ಕರಣಾ ಘಟಕ ಸ್ಥಾಪಿಸಬಾರದು ಎಂದು ರೈತರು ಆರಂಭಿಸಿದ ಹೋರಾಟ ನಿಷೇಧಾಜ್ಞೆ ನಡುವೆ ಭಾನುವಾರವೂ ಮುಂದುವರಿದಿದೆ. ರೈತ ಮಹಿಳೆ ಸೇರಿದಂತೆ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ನಿಷೇಧಾಜ್ಞೆಯಿದ್ದರೂ ರೈತರು ಸೇರಿದಾಗ, ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ, ವಾಪಸ್ ಹೋಗಿ ಎಂದರು. ಇದಕ್ಕೆ ಜಗ್ಗದ ರೈತರು, ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮುಂದುವರಿಸಿದಾಗ ಪೊಲೀಸರು ಬೆದರಿಸಿದರು.
ಆಗ ಕಗ್ಗಳದಹುಂಡಿಯ ಸಿದ್ದಮ್ಮ ಹಾಗೂ ತ್ರಿಯಂಬಕಪುರದ ಕೆಂಪರಾಜು ಆತ್ಮಹತ್ಯೆಗೆ ಯತ್ನಿಸಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ಕೆಲ ಪೊಲೀಸರು ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಆತ್ಮಹತ್ಯೆಗೆ ಯತ್ನಿಸಿದ ಇಬ್ಬರನ್ನು ಕೂಡಲೇ ಗುಂಡ್ಲುಪೇಟೆಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ. ಪ್ರಾಣಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.