ವಿಶ್ವದ ಆತ್ಮಹತ್ಯಾ ರಾಜಧಾನಿ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ. ದೇಶದಾದ್ಯಂತ ನೂರಾರು ಮಂದಿ ದಿನನಿತ್ಯ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಘಟನೆಯ ‘ಆತ್ಮಹತ್ಯೆ ತಡೆ: ಜಾಗತಿಕ ಕರ್ತವ್ಯ’ ಎಂಬ ವರದಿಯ ಪ್ರಕಾರ, ಜಗತ್ತಿನಲ್ಲಿ ಪ್ರತಿ 40 ಸೆಕೆಂಡುಗಳಿಗೆ ಒಬ್ಬರು ತಮ್ಮನ್ನು ಕೊಂದುಕೊಳ್ಳುತ್ತಿದ್ದಾರೆ. ಭಾರತ ಸೇರಿದಂತೆ ಬಹುಪಾಲು ಎಲ್ಲೆಡೆ ಮಹಿಳೆಯರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಆದರೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಂತಹ ದೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಯುವಜನರಲ್ಲಿ ಆತ್ಮಹತ್ಯಾ ಪ್ರವೃತ್ತಿ ಹೆಚ್ಚಾಗುತ್ತಿರುವುದು ಆತಂಕ ಹುಟ್ಟಿಸಿದೆ. 2013ರಲ್ಲಿ ದೇಶದಲ್ಲಿ 1.35 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಲ್ಲಿ 11,600 ಮಂದಿ ಕರ್ನಾಟಕದವರು ಎಂಬ ವರದಿಯ ಬಗ್ಗೆ ಗಂಭೀರ ಪರಿಶೀಲನೆ ಅಗತ್ಯ.
ವಿಶ್ವ ಆರೋಗ್ಯ ಸಂಘಟನೆ ಮತ್ತು ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ಸಂಘಟನೆ ಸೆಪ್ಟೆಂಬರ್ 10ಅನ್ನು ‘ವಿಶ್ವ ಆತ್ಮಹತ್ಯೆ ತಡೆ ದಿನ’ವನ್ನಾಗಿ ಘೋಷಿಸಿ ಜನಜಾಗೃತಿ ಮೂಡಿಸುತ್ತಿವೆ. ನಿಮ್ಹಾನ್ಸ್ ನಂತಹ ಸ್ಥಳೀಯ ಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಆದರೂ ನಿರೀಕ್ಷಿತ ಯಶಸ್ಸು ಸಾಧ್ಯವಾಗಿಲ್ಲ. ಆತ್ಮಹತ್ಯೆ ಕುರಿತ ಅಂಕಿಸಂಖ್ಯೆಗಳು ಅದರ ಹಿಂದಿನ ಕಾರಣಗಳನ್ನೂ ಸ್ಪಷ್ಟವಾಗಿ ತೆರೆದಿಟ್ಟಿವೆ. ಆರ್ಥಿಕ, ಸಾಮಾಜಿಕ ಸಮಸ್ಯೆ, ಮಾನಸಿಕ ದ್ವಂದ್ವ, ಸಡಿಲಗೊಳ್ಳುತ್ತಿರುವ ಕೌಟುಂಬಿಕ ವ್ಯವಸ್ಥೆ, ಹದಗೆಡುವ ಸಂಬಂಧ, ಹೊಂದಾಣಿಕೆ ಮನೋಭಾವದ ಕೊರತೆ, ಆಧುನಿಕ ಬದುಕಿನ ಅತಿಯಾದ ಒತ್ತಡ, ಅನಾರೋಗ್ಯಕರ ಸ್ಪರ್ಧೆ, ನಕಾರಾತ್ಮಕ ಮನೋಭಾವ, ಬದಲಾದ ಜೀವನಶೈಲಿ ತಂದೊಡ್ಡುತ್ತಿರುವ ಆರೋಗ್ಯ ಸಮಸ್ಯೆಗಳು ಆತ್ಮಹತ್ಯೆ ಪ್ರವೃತ್ತಿಗೆ ಮುಖ್ಯ ಕಾರಣಗಳೆಂದು ಗುರುತಿಸಲಾಗಿದೆ.
15-–29 ವರ್ಷದೊಳಗಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಈ ವಯೋಮಾನದ ಒಂದು ಲಕ್ಷ ಮಂದಿಯಲ್ಲಿ 35 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬದುಕಿನ ಒತ್ತಡಗಳನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸದ ಕೊರತೆ ಸಾವಿನಲ್ಲಿ ಪರಿಹಾರ ಕಂಡುಕೊಳ್ಳುವ ಮನೋಭಾವವನ್ನು ಹೆಚ್ಚಿಸುತ್ತಿದೆ. ಮಾನಸಿಕ ನೋವು ದೈಹಿಕ ಕಾಯಿಲೆಗಿಂತ ಅತಿ ಭಿನ್ನ ಹಾಗೂ ಸಂಕೀರ್ಣವಾದ ಸಮಸ್ಯೆ. ಸಣ್ಣಪುಟ್ಟ ದೈಹಿಕ ಕಾಯಿಲೆಗಳಿಗೂ ಆಸ್ಪತ್ರೆಗೆ ಎಡತಾಕುವ ಜನ, ಬದುಕನ್ನೇ ಕೊನೆಗಾಣಿಸಬಲ್ಲ ಖಿನ್ನತೆ, ತೀವ್ರ ಒತ್ತಡದಂತಹ ಸಮಸ್ಯೆಗಳನ್ನು ಸಾಮಾಜಿಕ ಕಾರಣಗಳ ಸಲುವಾಗಿ ನಿರ್ಲಕ್ಷಿಸುತ್ತಾರೆ.
ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮುಖ್ಯ ನೀಡಿ ಹಿರಿಯರಿಗೆ ಆಪ್ತಸಲಹೆ, ಮಕ್ಕಳಲ್ಲಿ ವಿಶಾಲ ದೃಷ್ಟಿಕೋನ, ದೃಢಚಿತ್ತ, ಸಕಾರಾತ್ಮಕ ಮನೋಭಾವ, ಆರೋಗ್ಯಕರ ಸ್ಪರ್ಧೆ ಹುಟ್ಟುಹಾಕಲು ಸಾಧ್ಯವಾದರೆ ಆತ್ಮಹತ್ಯೆಯಂತಹ ತೀವ್ರ ಹತಾಶ ಮನೋಭಾವಕ್ಕೆ ಕಡಿವಾಣ ಹಾಕುವುದು ದುಸ್ತರವೇನೂ ಅಲ್ಲ. ಆತ್ಮಹತ್ಯೆ ಯತ್ನವನ್ನು ಅಪರಾಧ ಎಂದು ಪರಿಗಣಿಸುವುದನ್ನು ಕೈಬಿಡುವುದೂ ಈ ಸಮಸ್ಯೆ ಪರಿಹಾರ ಯತ್ನದಲ್ಲಿ ಮುಖ್ಯ ಹೆಜ್ಜೆ. ಇದರಿಂದ ವ್ಯಕ್ತಿಗಳು ಅನುಭವಿಸುವ ಸಮಸ್ಯೆಗಳ ಕುರಿತಂತೆ ಮುಕ್ತ ಸಂವಾದ ಸಾಧ್ಯವಾಗುತ್ತದೆ. ಸಮಾಜದಲ್ಲಿ ಈ ಕುರಿತಂತೆ ಸಂವೇದನಾಶೀಲತೆ ಮೂಡುವುದು ಅತ್ಯವಶ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.