ಪುತ್ತೂರು: ಹೊಸನಗರ ರಾಮಚಂದ್ರಾ-ಪುರ ಮಠದ ರಾಘವೇಶ್ವರ ಸ್ವಾಮೀಜಿ ಅವರಿಗೆ ಬ್ಲ್ಯಾಕ್ಮೇಲ್ ಮಾಡಿದ ಆರೋಪದಡಿ ಬಂಧಿತರಾಗಿರುವ ದಿವಾ-ಕರ ಶಾಸ್ತ್ರಿ ಅವರ ಸಹೋದರ ಶ್ಯಾಂ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆಗೆ ಕಾರಣ-ವಾದ ಅಂಶಗಳನ್ನು ಪತ್ತೆಹಚ್ಚುವ ಕಾರ್ಯ-ವನ್ನು ಪೊಲೀಸರು ಆರಂಭಿಸಿದ್ದಾರೆ.
‘ನನ್ನ ಪತಿಗೆ ರಾಮಚಂದ್ರಾಪುರ ಮಠದ ಕಡೆಯಿಂದ ಒತ್ತಡ ಇತ್ತು. ಅದರಿಂದ ಅವರು ತೀವ್ರವಾಗಿ ನೊಂದಿ-ದ್ದರು’ ಎಂದು ಶ್ಯಾಂಪ್ರಸಾದ್ ಅವರ ಪತ್ನಿ ಸಂಧ್ಯಾಲಕ್ಷ್ಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಹೊರತಾಗಿ ಯಾವ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ದೂರು ನೀಡಿಲ್ಲ, ಯಾರ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ ಎಂದು ಇಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ಮಂಜಯ್ಯ ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಲ್ಲೂಕಿನ ಕೆದಿಲದಲ್ಲಿರುವ ಶ್ಯಾಂ-ಪ್ರಸಾದ್ ಅವರ ಮನೆಯ ಬಳಿ ಸೋಮ-ವಾರ ಮಧ್ಯಾಹ್ನದ ನಂತರ ಪುರೋ-ಹಿತರ ಉಪಸ್ಥಿತಿಯಲ್ಲಿ ಶವಸಂಸ್ಕಾರ ನಡೆಯಿತು, ರಾಮಚಂದ್ರಾಪುರ ಮಠದ ವತಿಯಿಂದ, ಊರ ವತಿಯಿಂದ ಹವ್ಯಕ ಸಮುದಾಯದವರು ಭಾಗವಹಿಸಿದ್ದರು.
ಯಾರಿಂದ ಕೊನೆಯ ಮೊಬೈಲ್ ಕರೆ?: ಶ್ಯಾಂಪ್ರಸಾದ್ ಭಾನುವಾರ ಮಧ್ಯಾಹ್ನ ತಮ್ಮ ಮನೆಯವರ ಜತೆ ಊಟ ಮಾಡುತ್ತಿದ್ದ ವೇಳೆ ಅವರ ಮೊಬೈಲ್ಗೆ ಕರೆಯೊಂದು ಬಂದಿತ್ತು. ಆ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಂತೆ ತಮ್ಮ ಮೊಬೈಲ್ ಎಸೆದು ಕೋಣೆಗೆ ತೆರಳಿದ ಅವರು ಗುಂಡು ಹಾರಿಸಿಕೊಂಡರು. ಮೊಬೈಲ್ಗೆ ಕರೆ ಮಾಡಿರುವ ವ್ಯಕ್ತಿ ಯಾರು? ಆತ ಇವರಿಗೆ ಜೀವ ಬೆದರಿಕೆ ಒಡ್ಡಿದ್ದನೇ ಅಥವಾ ಇನ್ನಾವುದೋ ಮಾಹಿತಿಯನ್ನು ನೀಡಿದ್ದನೇ ಎಂಬ ಕುತೂಹಲ ಇದೀಗ ತೀವ್ರಗೊಂಡಿದೆ.
ರಾಘವೇಶ್ವರ ಸ್ವಾಮೀಜಿಯ ವಿರುದ್ದ ಲೈಂಗಿಕ ಆರೋಪ ಮಾಡಿರುವ ಸಹೋದರ ದಿವಾಕರ ಶಾಸ್ತ್ರಿಯ ವಿಚಾರದ ಬಗ್ಗೆ ಶ್ಯಾಂಪ್ರಸಾದ್ ಶಾಸ್ತ್ರಿಯವರು ಸ್ವಾಮೀಜಿಯನ್ನು ಭೇಟಿ ಮಾಡಲು ಭಾನುವಾರ ತಯಾರಿ ನಡೆಸಿದ್ದರು. ಇದಕ್ಕಾಗಿ 2 ದಿನಗಳ ಹಿಂದೆಯೇ ಸ್ವಾಮೀಜಿಯ ಸಂದರ್ಶನಕ್ಕೆ ಅನುಮತಿಯನ್ನೂ ಪಡೆದುಕೊಂಡಿದ್ದರು. ಮಧ್ಯಾಹ್ನದ ಹೊತ್ತಿಗೆ ಕಾರಿನಲ್ಲಿ ಹೊರಡುವ ತಯಾರಿಯನ್ನೂ ನಡೆಸಿದ್ದರು ಎಂದು ಹೇಳಲಾಗುತ್ತಿದೆ.