ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯ ಅಂಧಕಾರದಲ್ಲಿ ನಕ್ಷತ್ರ ಕಂದೀಲು!

Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಕಲ್ಲಿದ್ದಲು ಕೊರತೆಯಿಂದ ರಾಯಚೂರಿನ ವಿದ್ಯುತ್‌ ಘಟಕಗಳು ಸ್ಥಗಿತಗೊಂಡು, ಅದರ ಪರಿಣಾಮವಾಗಿ ನಮ್ಮೂರು ಕತ್ತಲಲ್ಲಿ ಮುಳುಗಿತ್ತು. ಇಡೀ ಊರಲ್ಲಿದ್ದ ಯುಪಿಎಸ್‌ಗಳೆಲ್ಲಾ ಬೆಳಗಿನಿಂದ ಉರಿದು ಖಾಲಿಯಾಗಿದ್ದವು. ಮನೆಗಳಲ್ಲಿ ಟೀವಿಯ ಸದ್ದಿಲ್ಲದೆ ಒಂದು ರೀತಿಯ ಪ್ರಶಾಂತ ಮೌನ ಆವರಿಸಿತ್ತು. ಮನೆಗಳು ಮಾತ್ರವಲ್ಲ, ಸುತ್ತಮುತ್ತಲಿನ ಪರಿಸರವೂ ಸಹ ನೀರವ ಮೌನದಲ್ಲಿ ಮುಳುಗಿಹೋಗಿತ್ತು. ಮಿಕ್ಸಿ, ಗ್ರೈಂಡರ್‌ಗಳ ಸದ್ದಿಲ್ಲ.

ಸುತ್ತಮುತ್ತಲಿನ ಸಾಮಿಲ್, ಪ್ಲೇನಿಂಗ್ ಮಿಲ್‌ಗಳ ಕರ್ಕಶ ಶಬ್ದವಿಲ್ಲ. ಈ ಪ್ರಶಾಂತ ಇರುಳು, ಸುಮಾರು 30 ವರ್ಷಗಳ ಹಿಂದೆ ಆಧುನಿಕತೆ ಪ್ರವೇಶಿಸದ ಆ ಕಾಲದ ಗುಯ್‌ಗುಡುವ ಮೌನರಾತ್ರಿಗಳನ್ನು ನೆನಪಿಸಿತು. ಆ ನೆನಪಿನಲ್ಲೇ ಮುಳುಗೇಳುತ್ತಾ ವಾಸ್ತವದತ್ತ ಗಮನ ಹರಿಸಿದೆ. ಆದರೆ ನನ್ನ ಸುತ್ತಮುತ್ತಲಿನವರಾರಿಗೂ ಈ ತನ್ಮಯತೆ, ಪ್ರಶಾಂತತೆಯನ್ನು ಆಸ್ವಾದಿಸುವ ವ್ಯವಧಾನವಿರಲಿಲ್ಲ. ಕಾಲಗರ್ಭದೊಳಗೆ ಪಯಣಿಸುವ, ನೆನಪಿನಾಳಕ್ಕೆ ಇಳಿಯುವ ಪ್ರಶಾಂತ ಮನಸ್ಥಿತಿ ಇದ್ದಂತಿರಲಿಲ್ಲ. ಎಲ್ಲರೂ ಏನೋ ಒಂದು ರೀತಿಯ ಚಡಪಡಿಕೆಯಲ್ಲಿದ್ದರು.

ಗೃಹಿಣಿಯರು ‘ಕರೆಂಟ್ ಬಾರದಿದ್ದರೆ ಅಡುಗೆ ಆಗುವುದು ಯಾವಾಗ?’, ‘...ಅಯ್ಯೋ! ಹಾಳಾದ್ದು ಸೀರಿಯಲ್ ಮಿಸ್ಸಾಗಿ ಹೋಯಿತಲ್ಲ! ಹೀಗೆ ಅಂತ ಗೊತ್ತಿದ್ರೆ ನಾನು, ನಮ್ಮೆಜಮಾನರು ಸಿನಿಮಾಕ್ಕಾದರೂ ಹೋಗ್ತಿದ್ವಿ! (ಅಲ್ಲಿ ಜನರೇಟರ್ ಇರುತ್ತಲ್ಲ!)’ ಎಂದು ಅಸಹನೆಯಿಂದ ಗೊಣಗುವವರೇ ಹೆಚ್ಚಾಗಿದ್ದರು. ನನ್ನ ಸ್ನೇಹಿತರೊಬ್ಬರ ಮನೆಯೊಳಗಿನ ಟೀವಿ, ಮಿಕ್ಸರ್, ಗ್ರೈಂಡರ್ ಮುಂತಾದ ಯಂತ್ರಗಳಂತೆ ಮಕ್ಕಳೂ ಸ್ತಬ್ಧವಾಗಿಬಿಟ್ಟಿದ್ದರು. ಅಕ್ಕಪಕ್ಕದ ಮನೆ ಮಕ್ಕಳೂ ಸೇರಿದಂತೆ ಎಲ್ಲಾ ಒಂದೆಡೆ ಗರಬಡಿದವರಂತೆ ಕುಳಿತುಬಿಟ್ಟಿದ್ದರು.

ಕಾರ್ಟೂನ್ ಶೋ ನೋಡಲು ಟೀವಿ ಇಲ್ಲ, ಕಂಪ್ಯೂಟರ್‌ನಲ್ಲಿ ಆಡೋಣವೆಂದರೆ ಯುಪಿಎಸ್ ಖಾಲಿ! ವೀಡಿಯೋ ಗೇಮ್ ಆಡಲು ಸೆಲ್ ಡೌನ್! ಅಮ್ಮನ ಮೊಬೈಲ್ ಕಿತ್ಕೊಂಡು ಗೇಮ್ಸ್ ಆಡೋಣವೆಂದರೆ ಅದರಲ್ಲಿ ಬ್ಯಾಟರಿ ಇರುವುದು ಒಂದೇ ಕಡ್ಡಿ! ಹೊರಗೆ ರಸ್ತೆಯಲ್ಲಿ ಆಡೋಣವೆಂದರೆ ಕತ್ತಲು. ಎಷ್ಟೋ ವರ್ಷಗಳ ನಂತರ, ಪ್ರಾಯಶಃ ಕೆಲ ಮಕ್ಕಳು ಜೀವನದಲ್ಲಿ ಮೊದಲ ಬಾರಿಗೆ ಈ ರೀತಿಯ ಅಂಧಕಾರದಲ್ಲಿ ಕುಳಿತಿರುವಂತೆ ಮಂಕಾಗಿದ್ದರು. ಯಾವುದೋ ತೀವ್ರ ಬಿಕ್ಕಟ್ಟಿಗೆ ಒಳಗಾದವರಂತೆ ಆರ್ತರಾಗಿ ಕುಳಿತುಬಿಟ್ಟಿದ್ದರು!ಪೆಚ್ಚಾಗಿ ಕುಳಿತ ಮಕ್ಕಳನ್ನು– ‘ಏನ್ ಮಾಡ್ತಿದೀರ ಎಲ್ಲಾ?’ ಎಂದೆ. ‘ಕರೆಂಟೇ ಇಲ್ಲ, ಏನು ಮಾಡೋದು? ಸುಮ್ನೆ ತೂಕಡಿಸುತ್ತಾ ಕೂತಿದೀವಿ’ ಅಂದ್ಲು ಒಬ್ಬಳು ಪುಟಾಣಿ. 

‘ಯಾವುದಾದರೂ ಹಾಡು ಹೇಳಿ’ ಅಂದೆ. ಸಿನಿಮಾ ಹಾಡು ಬಿಟ್ಟರೆ ಬೇರೆ ಯಾವುದೇ ಭಕ್ತಿಗೀತೆಯಾಗಲೀ, ಜನಪದ ಗೀತೆಯಾಗಲೀ ಯಾರಿಗೂ ಗೊತ್ತಿರಲಿಲ್ಲ. ಒಬ್ಬರಿಗೊಬ್ಬರು ಒಗಟು ಹೇಳಿ ಅಂದೆ. ಎಲ್ಲೋ ಒಂದೆರಡು ಒಗಟು ಈಚೆ ಬಂದವೇ ಹೊರತು ಮತ್ತೆ ಎಲ್ಲಾ ಮುಖ ಒಣಗಿಸಿಕೊಂಡು ಕೂತವು. ಗಾದೆಯಂತೂ ಹೊರಡಲೇ ಇಲ್ಲ. ‘ಕವಡೆ, ಪಗಡೆ, ಅಳುಗುಣಿ ಮಣೆ ಏನಾದರೂ ಇದ್ರೆ ತಗೊಂಡು ಬನ್ನಿ’ ಎಂದೆ. ‘ಅವೆಲ್ಲ ಏನು?’ ಎನ್ನುವಂತೆ ವಿಚಿತ್ರವಾಗಿ ಮುಖ ಮುಖ ನೋಡಿದವು. ಇವೆಲ್ಲಾ ಏನೂ ಇಲ್ಲ ಎಂದು ತಲೆ ಅಲ್ಲಾಡಿಸಿದವು. ಕೊನೆಗೆ ಒಂದು ಮಗು ಎದ್ದು ಹೋಗಿ ಅವರಪ್ಪ ಆಡುತ್ತಿದ್ದ ಇಸ್ಪೀಟ್ ಪ್ಯಾಕ್ ತಂದಿತು.

ಏನೋ ಯೋಚಿಸಿದ ನಾನು ‘ಸರಿ ಬನ್ನಿ!’ ಎಂದು ಮಕ್ಕಳನ್ನು ಕರೆದುಕೊಂಡು ಟೆರೇಸ್ ಮೇಲೆ ಬಂದೆ. ನೆತ್ತಿಯ ಮೇಲಿನ ಶುಭ್ರ ಆಕಾಶದ ತುಂಬಾ ಹೊಳೆಯುವ ನಕ್ಷತ್ರಗಳು, ಗ್ರಹಗಳು! ಹಾಲುಚೆಲ್ಲಿದಂತೆ ದಕ್ಷಿಣದಿಂದ ಉತ್ತರಕ್ಕೆ ಹಾದು ಹೋಗಿದ್ದ ಕ್ಷೀರಪಥ! ‘ಮಕ್ಕಳೇ ಮೇಲೆ ನೋಡಿ’ ಎಂದೆ. ‘ವಾಹ್! ಆಕಾಶದಲ್ಲಿ ಇಷ್ಟೊಂದು ನಕ್ಷತ್ರ ಇರುತ್ತಾ?’ ಎಂದು ಮಕ್ಕಳು ಆಶ್ಚರ್ಯಪಟ್ಟರು. ‘ಅಲ್ಲಿ ಯಾವ್ಯಾವ ನಕ್ಷತ್ರ ಇವೆ ಎಂದು ಯಾರಾದರೂ ಗುರುತಿಸಿ ಹೇಳ್ತೀರಾ?’ ಎಂದು ಕೇಳಿದೆ. ಅಯಾರಿಗೂ ಯಾವ ನಕ್ಷತ್ರದ ಪರಿಚಯವೂ ಇರಲಿಲ್ಲ. ಧ್ರುವ ನಕ್ಷತ್ರ, ಸಪ್ತರ್ಷಿಮಂಡಲ, ಶನಿ, ಗುರು, ಶುಕ್ರ ಮುಂತಾದ ಪ್ರಮುಖ ಆಕಾಶಕಾಯಗಳನ್ನು ಗುರುತಿಸಲೂ ಸಾಧ್ಯವಾಗಲಿಲ್ಲ. ಸಿಂಹ, ವೃಶ್ಚಿಕ ರಾಶಿಯಲ್ಲಿನ ನಕ್ಷತಗಳನ್ನು ನೋಡಿ ಮಕ್ಕಳು ಅಚ್ಚರಿಪಟ್ಟರು.  

ಕುಂತಿ, ನಕುಲ, ದ್ರೌಪದಿ ಮೊದಲಾದ ಪುಂಜಗಳ ಹೆಸರಿನ ಹಿಂದಿನ ಗ್ರೀಕ್ ಪುರಾಣದ ದಂತಕತೆಗಳನ್ನು ಕೇಳಿ ಖುಷಿಪಟ್ಟರು. ಹಲವು ಮಕ್ಕಳು ಜೀವಮಾನದಲ್ಲಿ ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಲ್ಲ. ಆಧುನಿಕತೆಯ ಪ್ರತೀಕವಾದ  ಪ್ರಜ್ವಲಿಸುವ ಮರ್ಕ್ಯುರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ  ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಲ್ಲ. ಹಾಗೊಂದು ವೇಳೆ ನೋಡುವ ಪ್ರಯತ್ನ ಮಾಡಿದ್ದರೂ ಅವರಿಗೆ ಪಟ್ಟಣದ ಪ್ರಖರ ದೀಪಗಳ ನಡುವೆ ಏನೂ ಕಾಣುತ್ತಲೂ ಇರಲಿಲ್ಲ. ಅವರನ್ನು ಊರಿನ ಹೊರವಲಯಕ್ಕೆ ಕರೆದೊಯ್ದು ಅವರಿಗೆ ಆಕಾಶ, ನಕ್ಷತ್ರಪುಂಜಗಳು, ಗ್ರಹಗಳನ್ನು ಪರಿಚಯಿಸುವ ಕೆಲಸವನ್ನು ಮಾಡಲು ಯಾಂತ್ರಿಕ ಬದುಕಿನಲ್ಲಿ ತಂದೆ-ತಾಯಿಗಳಿಗೆ ಪುರಸೊತ್ತಾದರೂ ಎಲ್ಲಿ?

ಮಕ್ಕಳಲ್ಲಿ ಒಂದು ಹುಡುಗಿ ತೀರಾ ಚಿಂತಿತಳಾಗಿದ್ದಳು. ಅವಳೊಂದು ಅಸೈನ್‌ಮೆಂಟ್ ಮಾಡಬೇಕಿತ್ತು. ಅದಕ್ಕೆ ಕರೆಂಟ್ ಇಲ್ಲವಲ್ಲ ಎಂಬ ಯೋಚನೆ ಅವಳದು. ‘ಅಸೈನ್‌ಮೆಂಟ್ ವಿಷಯ ಏನು?’ ಎಂದೆ. ಅದಕ್ಕವಳು ‘ನೆಲದೊಳಗಿನ ಸಂಪತ್ತುಗಳು, ಭೂ ಸಂಪನ್ಮೂಲಗಳ ಸುಸ್ಥಿರ ಬಳಕೆ ಹಾಗೂ ಜಮೀನಿನ ಬಳಕೆ ಕುರಿತ ಜನಜನಿತ ಜ್ಞಾನ’- ಈ ಮೂರು ವಿಷಯದಲ್ಲಿ  ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ಎಂದು ಕೇಳಿದಳು. ನಾನು ‘ಜಮೀನು ಬಳಕೆ ಕುರಿತು ಜನಜನಿತ ಜ್ಞಾನದ’ ಬಗ್ಗೆ ಅಸೈನ್‌ಮೆಂಟ್ ಬರೆಯುವಂತೆ ಸೂಚಿಸಿದೆ. ‘ಅದಕ್ಕೆ ಇಂಟರ್‌ನೆಟ್‌ನಲ್ಲಿ ವಿಷಯ ಸಿಗುತ್ತಾ?’ ಎಂದು ಕೇಳಿದಳು. ‘ಈ ವಿಷಯಕ್ಕೆ ಇಂಟರ್‌ನೆಟ್‌ನಲ್ಲಿ ಹೆಚ್ಚಿನ ವಿಷಯ ಸಿಗಲಾರದು. ನೀನೇ ಕೆಲವು ಕೃಷಿಕರನ್ನ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಬೇಕು’ ಎಂದೆ. ಆ ಹುಡುಗಿ ‘ಅಯ್ಯೋ ಅದನ್ನೆಲ್ಲಾ ಯಾರು ಮಾಡ್ತಾರೆ?’ ಎಂದು ಮುಖ ಬಾಡಿಸಿಕೊಂಡಳು.

ಮಕ್ಕಳು ಬೆಳೆಯುತ್ತಿರುವ ಪರಿ, ಅವರ ಚಿಂತನಾ ಧಾಟಿಯನ್ನು ನೋಡಿ ಗಾಬರಿ ಆಯಿತು. ಆಧುನಿಕತೆ, ನಾಗರಿಕತೆಯ ಸೌಲಭ್ಯಗಳು ಹಾಗೂ ಪರಿಕರಗಳಿಗೆ ಒಗ್ಗಿಕೊಂಡಿರುವ ನಮ್ಮ ಮಕ್ಕಳಿಗೆ ಅದಿಲ್ಲದಿದ್ದರೆ ಅರೆಕ್ಷಣವೂ ಜೀವಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ನವಮಾಧ್ಯಮಗಳ ಪ್ರಭಾವದಿಂದಾಗಿ ಮಕ್ಕಳು ಪ್ರಕೃತಿಯ ವಿಸ್ಮಯಗಳನ್ನು ನೋಡುವುದನ್ನು, ಅವುಗಳಿಗೆ ಸ್ಪಂದಿಸುವ ಸಹಜಗುಣವನ್ನು ಮರೆತೇ ಹೋಗಿವೆ, ಕೀ ಕೊಟ್ಟ ಯಂತ್ರಗಳಾಗಿವೆ.

ಆಧುನಿಕ ಮಾಧ್ಯಮಗಳಿಗೆ ಅತಿಯಾಗಿ ತೆರೆದುಕೊಂಡ ಪರಿಣಾಮವಾಗಿ ಮಕ್ಕಳಲ್ಲಿರಬೇಕಾದ ಸಹಜ ಕುತೂಹಲ, ಮುಗ್ಧತೆ  ಮುಕ್ಕಾಗಿಹೋಗಿದೆ. ಗಿಡ, ಮರ, ಹಕ್ಕಿ, ಪಕ್ಷಿ, ಬೆಟ್ಟ, ಗುಡ್ಡ ,ಆಕಾಶ, ನಕ್ಷತ್ರಗಳೆಲ್ಲಾ ವೀಡಿಯೋ ಗೇಮಿನ ಥ್ರೀಡಿ ಚಿತ್ರಗಳಾಗಿ ನಿಜಸ್ಪಂದನವನ್ನು ಕಳೆದುಕೊಂಡಿವೆ. ಯಂತ್ರ, ತಂತ್ರಜ್ಞಾನ ಸ್ತಬ್ಧವಾದರೆ  ಯುವಪೀಳಿಗೆ ಜೀವಂತಿಕೆಯನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿರುವುದು ನನ್ನ ದೃಷ್ಟಿಯಲ್ಲಿ ಘೋರ ದುರಂತ ಎನ್ನಿಸುತ್ತದೆ.

ಪೋಷಕರು ಮತ್ತು ಗುರುಗಳು ಮಕ್ಕಳಿಗೆ ನಮ್ಮ ಪರಂಪರೆ, ದೇಸೀ ಜ್ಞಾನ ಹಾಗೂ ಪ್ರಕೃತಿಯ ರಹಸ್ಯಗಳನ್ನು ಶೋಧಿಸುವ ಮತ್ತು ಅವುಗಳಲ್ಲಿ ತಾದ್ಯಾತ್ಮ ಬೆಳೆಸಿಕೊಳ್ಳುವ ಪಾಠ ಹೇಳಿಕೊಡಬೇಕಿದೆ. ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು, ಆಧುನಿಕ ಬೆಳಕಿನಾಚೆಯ ಪ್ರಖರ ನಕ್ಷತ್ರ ದರ್ಶನವನ್ನು ಅವರಿಗೆ ಮಾಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT