ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ. ಭಾಸ್ಕರ ರಾವ್ ಅವರ ರಾಜೀನಾಮೆಗೆ ಒತ್ತಾಯಿಸಿ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಭಾನುವಾರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದೆ.
‘ಭಾಸ್ಕರ ರಾವ್ ರಾಜೀನಾಮೆಗೆ ಒತ್ತಾಯಿಸಿ ಪಕ್ಷದ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ನಗರದಾದ್ಯಂತ ಸಂಚರಿಸಿ ಒಂದೇ ದಿನದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹಿಸಿದ್ದಾರೆ’ ಎಂದು ಎಪಿಪಿ ಮುಖಂಡ ರವಿ ಕೃಷ್ಣಾರೆಡ್ಡಿ ಮಾಹಿತಿ ನೀಡಿದ್ದಾರೆ.
‘ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮೂರು ಹಂತಗಳಲ್ಲಿ ಸಹಿ ಸಂಗ್ರಹಿಸಲಾಗಿದೆ.
ಎಲ್ಲ ಬಡಾವಣೆಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ಸಹಿ ಹಾಕಿದ್ದಾರೆ. ಸಹಿ ಸಂಗ್ರಹದ ಪ್ರತಿಯನ್ನು ಮುಖ್ಯಮಂತ್ರಿ,
ಸಚಿವರು ಮತ್ತು ಎಲ್ಲ ಪಕ್ಷಗಳ ಶಾಸಕರು, ವಿಶೇಷ ತನಿಖಾ ತಂಡ ಹಾಗೂ ರಾಜ್ಯಪಾಲರಿಗೂ ಸಲ್ಲಿಸಲಾಗುವುದು’
ಎಂದು ಮಾಹಿತಿ ನೀಡಿದ್ದಾರೆ.