ತಿಪಟೂರು: ತಾಲ್ಲೂಕಿನ ಎಚ್.ಮುದ್ದೇನಹಳ್ಳಿಯಲ್ಲಿ ಕಿರು ನೀರು ಸರಬರಾಜು ಸಿಸ್ಟನ್ಗೆ ನೀರು ತುಂಬುವ ಮೊದಲೇ ಕಳಪೆ ಕಾಮಗಾರಿ ಬಯಲಾಗಿದೆ.
ಹಾಲ್ಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಮುದ್ದೇನಹಳ್ಳಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಮಿನಿಟ್ಯಾಂಕ್ ಅಳವಡಿಸಿರುವ ಕಾಮಗಾರಿಯ ಕಳಪೆ ಗುಣಮಟ್ಟ ಬಟಾಬಯಲಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಎರಡು ಮಿನಿಟ್ಯಾಂಕ್ಗಳ ಬುಡ ಆರಂಭದಲ್ಲೇ ಶಿಥಿಲಗೊಂಡಿದೆ. ಕಲ್ಲು ಕಿತ್ತು ಬಂದಿವೆ. ಕಳಪೆ ಕಾಮಗಾರಿ ಮತ್ತು ವ್ಯವಸ್ಥೆಯ ಲೋಪಕ್ಕೆ ಕನ್ನಡಿ ಹಿಡಿದಿವೆ. ಯಾವುದೇ ಕ್ಷಣದಲ್ಲಿ ಟ್ಯಾಂಕ್ ಉರುಳುವ ಸ್ಥಿತಿಯಲ್ಲಿದೆ. ಆಟವಾಡುವ ಮಕ್ಕಳ ಮೇಲೆ ಉರುಳಿದರೆ ಗತಿಯೇನು ಎಂಬ ಆತಂಕವೂ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸದೆ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈಗಲಾದರೂ ಇಲಾಖೆ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಗ್ರಾಮಕ್ಕೆ ತ್ವರಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.