ಬೆಂಗಳೂರು: ‘ತ್ವರಿತ ಮತ್ತು ಪಾರದರ್ಶಕ ಫಲಿತಾಂಶಕ್ಕಾಗಿ ಗಣಕೀಕೃತ ಮೌಲ್ಯಮಾಪನ ಪದ್ಧತಿ ಸಹಾಯ ಮಾಡುತ್ತದೆ’ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್.ರವಿಂದ್ರನಾಥ್ ಹೇಳಿದರು.
ಎಸ್.ಡಿ.ಎಸ್ ಕ್ಷಯರೋಗ ಸಂಶೋಧನಾ ಸಂಸ್ಥೆ ಮತ್ತು ರಾಜೀವ ಗಾಂಧಿ ಎದೆ ರೋಗಗಳ ಸಂಸ್ಥೆಯಲ್ಲಿ ನೂತನವಾಗಿ ಆರಂಭವಾದ ಗಣಕೀಕೃತ ಮೌಲ್ಯಮಾಪನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬರುತ್ತಿದ್ದು, ಗಣಕೀಕೃತ ಮೌಲ್ಯಮಾಪನದಿಂದ ಲೋಪವಿಲ್ಲದೇ ಫಲಿತಾಂಶ ನೀಡಬಹುದು’ ಎಂದರು. ‘ಇದಕ್ಕಾಗಿ ಮೈಂಡ್ ಲಾಜಿಕ್ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೂ, ವರ್ಷಕ್ಕೆ ಸುಮಾರು ₹ 30 ವೆಚ್ಚವಾಗುತ್ತೆ ಎಂದರು.
ಮೌಲ್ಯಮಾಪನ ಕುಲಸಚಿವ ಡಾ.ಎಸ್.ಸಚ್ಚಿದಾನಂದ ಮಾತನಾಡಿ, ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಲು ಆರೋಗ್ಯ ವಿ.ವಿ ಹೊಸ ಹೆಜ್ಜೆ ಇಡುತ್ತಿದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಲಿಖಿತ ಉತ್ತರ ಪತ್ರಿಕೆಗಳನ್ನು ಗಣಕಿಕೃತ ವ್ಯವಸ್ಥೆಯಲ್ಲಿ ಮೌಲ್ಯಮಾಪನ ಮಾಡಿ ಮೂರರಿಂದ ನಾಲ್ಕು ವಾರಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದರು.
ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಫಾರ್ಮಸಿ, ನರ್ಸಿಂಗ್, ಹೋಮಿಯೋಪತಿ, ಪಿಸಿಯೋಥೆರಪಿ, ಈ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳನ್ನು ಹೊಸ ಪದ್ದತಿಗೆ ಅಳವಡಿಸಲಾಗುವುದು ಎಂದರು.
*
ಪ್ರಧಾನಿ ನರೇಂದ್ರ ಮೋದಿಯವರ ‘ಡಿಜಿಟಲ್ ಇಂಡಿಯಾ’ ಕಾರ್ಯಕ್ರಮಕ್ಕೆ ಉತ್ತರ ಪತ್ರಿಕೆಗಳ ಗಣಕಿಕೃತ ಮೌಲ್ಯಮಾಪನ ಪದ್ಧತಿ ಬೆಂಬಲ ನೀಡುತ್ತದೆ.
-ಡಾ.ಎಸ್.ಸಚ್ಚಿದಾನಂದ,
ಮೌಲ್ಯಮಾಪನ ಕುಲಸಚಿವ