ತಿರುವನಂತಪುರ (ಪಿಟಿಐ): ಪಂಡಿತ್ ಜವಾಹರಲಾಲ್ ನೆಹರೂ ಅವರ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸ್ಥಳೀಯ ‘ಕೇಸರಿ’ ಪತ್ರಿಕೆಯಲ್ಲಿ ಮಾಡಿರುವ ಆರೋಪವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ರಾಜಶೇಖರನ್ ನೀಡಿರುವ ದೂರಿನ ಆಧಾರದ ಮೇಲೆ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕೇರಳದ ಗೃಹ ಸಚಿವ ರಮೇಶ್ ಚೆನ್ನಿತಲ ಡಿಜಿಪಿಗೆ ಸೂಚಿಸಿದ್ದಾರೆ.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಬಿ.ಗೋಪಾಲಕೃಷ್ಣನ್ ಅವರು ಬರೆದಿರುವ ಲೇಖನದಲ್ಲಿ ಭಾರತ ವಿಭಜನೆ, ಗಾಂಧೀಜಿ ಹತ್ಯೆ ಮೊದಲಾದ ದುರಂತಗಳಿಗೆ ನೆಹರೂ ಕಾರಣ ಎಂದು ಉಲ್ಲೇಖಿಸಲಾಗಿದೆ. ಆದರೆ, ಪತ್ರಿಕೆಯ ಸಂಪಾದಕರು ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ್ದಾರೆ.
ಸಂಬಂಧವಿಲ್ಲ: ಈ ಮಧ್ಯೆ ವಿವಾದಾತ್ಮಕ ಲೇಖನದಿಂದ ಆರ್ಎಸ್ಎಸ್ ಅಂತರ ಕಾಯ್ದುಕೊಂಡಿದೆ. ಅ.17ರಂದು ‘ಕೇಸರಿ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನವನ್ನು ಆರ್ಎಸ್ಎಸ್ ಕೂಡ ಖಂಡಿಸಿದೆ. ಲೇಖಕರ ಅಭಿಪ್ರಾಯಗಳನ್ನು ಪತ್ರಿಕೆ ಪ್ರಕಟಿಸಿದೆ. ಅದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆರ್ಎಸ್ಎಸ್ನ ರಾಷ್ಟ್ರೀಯ ಪ್ರಚಾರ ಪ್ರಮುಖ ಮನಮೋಹನ್ ವೈದ್ಯ ತಿಳಿಸಿದ್ದಾರೆ.