ಯಲಹಂಕ: ಇಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿ, ಪ್ರಜಾವಿಮೋಚನಾ ಚಳವಳಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ಉಪನಗರದ ಆರ್ಟಿಒ ಕಚೇರಿ ಮುಂಭಾಗದಲ್ಲಿ ಬೃಹತ್ ತಮಟೆ ಚಳವಳಿ ನಡೆಸಿದರು.
ಚಳವಳಿಯ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ವೆಂಕಟೇಶ್ ಮಾತನಾಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಸಾರಿಗೆ ಪರವಾನಗಿ ಪತ್ರ, ಚಾಲನ ಪರವಾನಗಿ ಪತ್ರ ನವೀಕರಣ ಹಾಗೂ ನೋಂದಣಿಪತ್ರ ಪಡೆದುಕೊಳ್ಳಲು ನಾಗರಿಕರು ತೀವ್ರ ಶೋಷಣೆಗೆ ಒಳಗಾಗುವಂತಾಗಿದೆ ಎಂದು ದೂರಿದರು.
ಸಾರಿಗೆ ಇಲಾಖೆಯ ಅಧೀಕ್ಷಕ ಶ್ರೀನಿವಾಸ್ ಮನವಿಪತ್ರ ಸ್ವೀಕರಿಸಿದರು. ಚಳವಳಿಯ ರಾಜ್ಯ ಉಪಾಧ್ಯಕ್ಷ ರಾಜಾನುಕುಂಟೆ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬಾಗಲೂರು ಪ್ರಕಾಶ್, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್.ಜಿ, ಉತ್ತರ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ, ಯಲಹಂಕ ಕ್ಷೇತ್ರದ ಅಧ್ಯಕ್ಷ ನಾಗೇನಹಳ್ಳಿ ವಿ.ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.