ಬೆಂಗಳೂರು: ‘ಸ್ವಚ್ಛ ಭಾರತ ಅಭಿಯಾನ’ದ ಬಗ್ಗೆ ಅರಿವು ಮೂಡಿಸಲು ಇಸ್ರೊ ಬಡಾವಣೆಯ ಆಲ್ಪೈನ್ ಶಾಲೆಯು ಭಾನುವಾರ ಹಮ್ಮಿಕೊಂಡಿದ್ದ ‘ಸ್ವಚ್ಛತಾ ಓಟ’ ಕಾರ್ಯಕ್ರಮದಲ್ಲಿ ಸುಮಾರು 500 ಮಂದಿ ಪಾಲ್ಗೊಂಡಿದ್ದರು.
ಬೆಳಿಗ್ಗೆ 7.30ಕ್ಕೆ ಆರಂಭವಾದ ಈ ಕಾರ್ಯಕ್ರಮಕ್ಕೆ ಪಾಲಿಕೆ ಸದಸ್ಯ ಮಂಜುನಾಥ್, ಶಾಲೆಯ ಸಂಸ್ಥಾಪಕ ಕಬೀರ್ ಹಾಗೂ ಸಬ್ಇನ್ಸ್ಪೆಕ್ಟರ್ ರಾಜು ಚಾಲನೆ ನೀಡಿದರು. ಶಾಲೆಯ ಮುಖ್ಯದ್ವಾರದಲ್ಲಿ ಆರಂಭವಾದ ಓಟವು ಇಸ್ರೊ ಬಡಾವಣೆಯ ಹಾದಿಯ ಮೂಲಕ ಕುಮಾರಸ್ವಾಮಿ ಬಡಾವಣೆಯ ಮಾರ್ಗವಾಗಿ ಸಾಗಿತು.
ಓಟದಲ್ಲಿ ಪಾಲ್ಗೊಂಡಿದ್ದವರು ಹಾದಿಯುದ್ದಕ್ಕೂ ಬಡಾವಣೆಯ ನಿವಾಸಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಅರಿವು ಮೂಡಿಸುವುದರ ಜೊತೆಗೆ ಮ್ಯಾರಥಾನ್ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ರೂ 5000, ರೂ 3000 ಹಾಗೂ ರೂ 2000 ನಗದು ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಸಸಿ ವಿತರಿಸಲಾಯಿತು.
ಶಾಲೆಯ ಪ್ರಾಂಶುಪಾಲೆ ಜಯಲಕ್ಷ್ಮೀ ಶಾಸ್ತ್ರಿ, ವಿದ್ಯಾರ್ಥಿಗಳ ಪೋಷಕರು, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.