ಅರ್ಜುನ್ ಜನ್ಯ ಶಿಷ್ಯನಾದ ಚಂದನ್ ಅವರೇ ಆಲ್ಬಂನ ಎಲ್ಲ ಹಾಡುಗಳಿಗೆ ಸಾಹಿತ್ಯ ರಚಿಸಿ, ಸಂಗೀತ ಮತ್ತು ನೃತ್ಯ ಸಂಯೋಜಿಸಿ ಹಾಡಿದ್ದಾರೆ. ಒಂದು ರೀತಿಯಲ್ಲಿ ಆಲ್ರೌಂಡರ್ ಆಟಗಾರ ಅವರು. ಇವರ ಪ್ರಯತ್ನಕ್ಕೆ ಬೆಂಬಲವಾಗಿ ಬಂಡವಾಳ ಹೂಡಿದವರು ದಿನೇಶ್, ಆರ್.ಎಸ್.ಎನ್. ಗೌಡ ಮತ್ತು ವಿನೋದ್ ಅಂಬಿಗರ್. ಈ ಆಲ್ಬಂಗೆ ಮೂರೂವರೆ ಲಕ್ಷ ರೂಪಾಯಿ ಖರ್ಚು ಮಾಡಿರುವ ಅವರು ಮುಂದೆಯೂ ಇಂಥ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಉತ್ಸಾಹದಲ್ಲಿದ್ದಾರೆ.
‘ನನ್ನ ಪ್ರಯತ್ನಕ್ಕೆ ಜನ ಮೆಚ್ಚುಗೆಯ ಜೊತೆಗೆ ಪೂರ್ಣಚಂದ್ರ ತೇಜಸ್ವಿ, ಐಂದ್ರಿತಾ ರೇ, ರಘು ದೀಕ್ಷಿತ್, ನೀತು, ರಕ್ಷಿತ್ ಶೆಟ್ಟಿ ಮುಂತಾದವರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಚಂದನ್ ತಮ್ಮ ಸಾರ್ಥಕತೆಯನ್ನು ಹೇಳಿಕೊಂಡರು. ಅವರು ಈಗಾಗಲೇ ‘ಸಂಜೀವ’ ಮತ್ತು ‘ಸೀಜರ್’ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾರೆ.