ಮನುಸ್ಮೃತಿಯು ಸಮಾಜದ ಒಂದು ವರ್ಗಕ್ಕೆ ಅಪರಿಮಿತ ಹಕ್ಕನ್ನು ಮತ್ತೊಂದು ವರ್ಗಕ್ಕೆ ಕೀಳು ದಾಸ್ಯವನ್ನು ವಹಿಸುತ್ತದೆ. ‘ಹಿಂದೂ ಧರ್ಮದ ತತ್ವಜ್ಞಾನ’ ಎಂಬ ತಮ್ಮ ಕೃತಿಯಲ್ಲಿ ಅಂಬೇಡ್ಕರ್, ಹಿಂದುತ್ವದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಏಕಿಲ್ಲ ಎಂಬುದನ್ನು ಮನುಸ್ಮೃತಿಯ ಅನೇಕ ಶ್ಲೋಕಗಳ ಉಲ್ಲೇಖದ ಮೂಲಕ ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಮನುಸ್ಮೃತಿ ಸುಡುವ ಚಳವಳಿಯನ್ನೂ ಅವರು ಮಾಡಿದ್ದರು.
ಆಶ್ಚರ್ಯವೆಂದರೆ ಇಂಥ ಮನುಸ್ಮೃತಿಯ ಶ್ಲೋಕಗಳನ್ನು ಭಯೋತ್ಪಾದಕ ಯಾಕೂಬ್ ಮೆಮನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರು ಉಲ್ಲೇಖಿಸಿರುವುದು! (ಪ್ರ.ವಾ., ಜುಲೈ 29). ನ್ಯಾಯಮೂರ್ತಿ ಉಲ್ಲೇಖಿಸಬೇಕಿರುವುದು ಭಾರತದ ಸಂವಿಧಾನವನ್ನು, ಸಂವಿಧಾನದ ವಿವಿಧ ಕಲಂಗಳನ್ನು. ಸಂವಿಧಾನದ ಅನುಚ್ಛೇದಗಳ ಆಧಾರದ ಮೇಲೆ ರಚಿತವಾದ ಕಾನೂನುಗಳ ಪ್ರಕಾರ ಅವರು ಶಿಕ್ಷೆ ನೀಡಬೇಕು. ಬದಲಿಗೆ ಅಸಮಾನತೆಯ ಶ್ರೇಣೀಕರಣ ಸಾರುವ ಮನುಸ್ಮೃತಿಯನ್ನು ಉಲ್ಲೇಖಿಸುವುದು ಎಷ್ಟು ಸರಿ? ಅದರಿಂದ ಅಸಮಾನತೆಯನ್ನು ಪರೋಕ್ಷವಾಗಿ ಪೋಷಿಸಿದಂತೆ ಆಗುವುದಿಲ್ಲವೆ?