ಪಣಜಿ: ಗೋವಾ ರಾಜಧಾನಿ ಪಣಜಿ ೪೫ನೆಯ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಆತಿಥ್ಯಕ್ಕೆ ಸನ್ನದ್ಧವಾಗಿದ್ದು, ಇದೇ ೨೦ ರಿಂದ ೩೦ರವರೆಗೆ ಪಣಜಿಯಲ್ಲಿ ಅಕ್ಷರಶಃ ಸಿನಿಮಾ ಸುಗ್ಗಿ. ಹತ್ತು ದಿನಗಳ ಕಾಲ ಪಣಜಿ ಉತ್ಸವ ಸಿನಿಮಾ ಜಗತ್ತಿನ ಗಮನ ಸೆಳೆಯಲಿದೆ.
ಪಣಜಿ ಹೊರವಲಯದ ಗೋವಾ ವಿಶ್ವ ವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ನ. ೨೦ರಂದು (ಗುರುವಾರ) ಸಂಜೆ ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ದೀಪ ಬೆಳಗಿಸುವ ಮೂಲಕ ಚಿತ್ರೋತ್ಸವವನ್ನು ಉದ್ಘಾಟಿಸುವರು. ಈ ಪ್ರಕ್ರಿಯೆಯಲ್ಲಿ ಅಮಿತಾಭ್ ಅವರಿಗೆ ಕನ್ನಡದ ನಟಿ ರಾಗಿಣಿ ದ್ವಿವೇದಿ ನೆರವಾಗುವರು.
ತಮಿಳು ಚಿತ್ರರಂಗದ ಹಿರಿಯ ನಟ ರಜನಿಕಾಂತ್ ಅವರು ಸಮಾರಂಭದ ಮುಖ್ಯ ಅತಿಥಿ. ಇದೇ ಸಂದರ್ಭದಲ್ಲಿ ಅವರಿಗೆ ಅವರ ಜೀವಮಾನದ ಸಿನಿಮಾ ಸಾಧನೆಗಾಗಿ ಭಾರತೀಯ ಸಿನಿಮಾ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮವಿದೆ. ಕೇಂದ್ರ ವಾರ್ತಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್, ಗೋವಾ ನೂತನ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಸಮಾರಂಭದಲ್ಲಿ ಉಪಸ್ಥಿತರಿರುವರು.
ಮೊಹಸಿನ್ ಮಖ್ಮಲ್ ಬಫ್ ನಿರ್ದೇಶನದ ಇರಾನ್ ಚಿತ್ರ ‘ದಿ ಪ್ರೆಸಿಡೆಂಟ್’ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ಭಾರತವೂ ಸೇರಿದಂತೆ ವಿಶ್ವದ ೭೫ ದೇಶಗಳ ೧೭೯ ಸಿನಿಮಾಗಳು ಹತ್ತು ದಿನಗಳ ಅವಧಿಯಲ್ಲಿ ಪ್ರದರ್ಶನಗೊಳ್ಳ-ಲಿವೆ. ಭಾರತೀಯ ಪನೋರಮಾ ವಿಭಾಗದಲ್ಲಿ ೨೬ ಕಥಾಚಿತ್ರಗಳೂ ಸೇರಿದಂತೆ ೪೧ ಸಿನಿಮಾಗಳು ಆಯ್ಕೆಯಾಗಿವೆ. ಮಲಯಾಳ, ಮತ್ತು ಮರಾಠಿ ಭಾಷೆಗಳ ತಲಾ ೭, ಬೆಂಗಾಳಿಯ ೫, ೨ ಹಿಂದಿ ಹಾಗೂ ಕನ್ನಡ, ಒರಿಯಾ, ತಮಿಳು, ಅಸ್ಸಾಮಿ ಹಾಗೂ ಖಾಸಿ ಭಾಷೆಯ ತಲಾ ಒಂದೊಂದು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ನಿಧನರಾದ ರಿಚರ್ಡ್ ಅಟೆನ್ ಬರೊ, ಕಾಲಿನ್ ವಿಲಿಯಮ್ಸ್, ಜೋಹ್ರಾ ಸೈಗಲ್, ಸುಚಿತ್ರಾ ಸೆನ್, ಅಕ್ಕಿನೇನಿ ನಾಗೇಶ್ವರರಾವ್ ಮತ್ತು ಫಾರೂಖ್ ಶೇಖ್ ಗೌರವಾರ್ಥ ಅವರ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ೪೫ನೇ ಚಿತ್ರೋತ್ಸವದಲ್ಲಿ ಚೀನಾ ದೇಶದ ೧೨ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಆ ದೇಶದ ೪೫ ಮಂದಿ ಕಲಾವಿದರು ಮತ್ತು ತಂತ್ರಜ್ಞರು ಚಿತ್ರೋತ್ಸವದಲ್ಲಿ ಭಾಗವಹಿಸುವುದು ವಿಶೇಷ. ಈಶಾನ್ಯ ಭಾರತ ರಾಜ್ಯಗಳ ಸಿನಿಮಾಗಳಿಗೂ ವಿಶೇಷ ಆದ್ಯತೆ ನೀಡಲಾಗಿದೆ.
ಪಣಜಿಯ ಐನಾಕ್ಸ್ ಚಿತ್ರಮಂದಿರ, ಕಲಾ ಅಕಾಡೆಮಿಗಳಲ್ಲಿ ಚಿತ್ರೋತ್ಸವದ ಪ್ರತಿನಿಧಿಗಳಿಗೆ ಮತ್ತು ಗೋವಾ ನಾಗರಿಕರು ಮಡಗಾಂವ್ನ ರವೀಂದ್ರ ಭವನ ಹಾಗೂ ರಾಜ್ಯದ ವಿವಿಧ ಪಟ್ಟಣಗಳ ಸ್ಥಳೀಯ ಚಿತ್ರ ಮಂದಿರಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಬಹುದು.
ಪಣಜಿಯಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವುದು ಗೋವಾ ಸರ್ಕಾರಕ್ಕೆ ಪ್ರತಿಷ್ಠೆ ವಿಷಯ. ಪಣಜಿಯನ್ನು ಚಿತ್ರೋತ್ಸವದ ಕಾಯಂ ನೆಲೆಯನ್ನಾಗಿ ಪರಿಗಣಿಸುವ ವಿಷಯದಲ್ಲಿ ೨೦೦೫ರಿಂದ ಇದ್ದ ಅನಿಶ್ಚಿತತೆ ಈಗ ಕೊನೆಗೊಂಡಿದೆ.
ಕೇಂದ್ರ ಸರ್ಕಾರ ಪಣಜಿಗೆ ಚಿತ್ರೋತ್ಸವದ ಕಾಯಂ ನೆಲೆಯ ಮಾನ್ಯತೆ ನೀಡಿದೆ. ಚಿತ್ರೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಚಿತ್ರೋತ್ಸವಕ್ಕೆ ಬರುವ ದೇಶದ ಹಾಗೂ ವಿದೇಶಗಳ ಸಿನಿಮಾಸಕ್ತರಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.