ಬೆಂಗಳೂರು: ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬಿಜೆಪಿ ರಾಜ್ಯ ಯುವ ಮೋರ್ಚಾ ಶನಿವಾರದಿಂದ (ಡಿ.20) ಸೋಮವಾರದವರೆಗೆ ಶಿಡ್ಲಘಟ್ಟದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಮೋರ್ಚಾದ ಅಧ್ಯಕ್ಷ ಮುನಿರಾಜುಗೌಡ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಡ್ಲಘಟ್ಟದ ರೈಲ್ವೆ ಗೇಟ್ ವೃತ್ತದಿಂದ ಆರಂಭವಾಗುವ ಪಾದಯಾತ್ರೆ ದೇವನಹಳ್ಳಿ, ಚಿಕ್ಕಜಾಲ, ಯಲಹಂಕ ಮಾರ್ಗವಾಗಿ ಕಾವೇರಿ ಜಂಕ್ಷನ್ ತಲುಪಲಿದೆ. ನಂತರ ಮುಖ್ಯಮಂತ್ರಿಯವರ ಮನೆ, ರಾಜಭವನದ ಬಳಿ ಹೋಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಿದರು.
ಮೂರು ದಿನಗಳಲ್ಲಿ 58 ಕಿ.ಮೀ. ದೂರವನ್ನು ಕ್ರಮಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯ ಒದಗಿಸಬೇಕೆಂಬ ಬೇಡಿಕೆಗಾಗಿ ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
25 ವರ್ಷಗಳಿಂದ ನಿರಂತರವಾಗಿ ಈ ಜಿಲ್ಲೆಗಳು ಬರ ಎದುರಿಸುತ್ತಿವೆ. ಕುಡಿಯುವ ನೀರಿಗೂ ಪರದಾಟ ಇದೆ. 25 ವರ್ಷಗಳಿಂದಲೂ ಶಾಶ್ವತ ನೀರಾವರಿ ಒದಗಿಸುವ ಭರವಸೆ ನೀಡುತ್ತಿರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಇಲ್ಲಿನ ಜನರ ಮೂಗಿಗೆ ತುಪ್ಪ ಹಚ್ಚುತ್ತಿದ್ದಾರೆ. ಅದನ್ನು ತಪ್ಪಿಸಲು ಬಿಜೆಪಿ ಯುವ ಮೋರ್ಚಾ ಹೋರಾಟ ಕೈಗೆತ್ತಿಕೊಂಡಿದೆ ಎಂದರು.