ಬೆಂಗಳೂರು: ನಗರದಲ್ಲಿ ಬುಧವಾರದಿಂದ ಮಳೆ ಬಿಡುವು ನೀಡಿದ್ದರಿಂದ ಟಾರುಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಾಚರಣೆ ಗುರುವಾರದಿಂದ ಆರಂಭವಾಗಲಿದೆ.
ಬಿಬಿಎಂಪಿ ಆಯುಕ್ತ ಜಿ. ಕುಮಾರ್ ನಾಯಕ್ ಬುಧವಾರ ಈ ಸಂಬಂಧ ಗುತ್ತಿಗೆದಾರರು ಹಾಗೂ ಎಂಜಿನಿಯರ್ಗಳ ಸಭೆ ನಡೆಸಿದರು. ‘ನಗರದ ರಸ್ತೆಗಳೆಲ್ಲ ಸಂಪೂರ್ಣವಾಗಿ ಹದಗೆಟ್ಟಿದ್ದು, ಅಪಘಾತಗಳು ಹೆಚ್ಚುತ್ತಿವೆ. ತಕ್ಷಣ ಗುಂಡಿ ಮುಚ್ಚುವ ಕಾರ್ಯಾಚರಣೆ ಆರಂಭಿಸಬೇಕು. ಗುಂಡಿ ಮುಚ್ಚುವ ಪ್ರಕ್ರಿಯೆ ಗುಣಮಟ್ಟದಿಂದ ಕೂಡಿರಬೇಕು’ ಎಂದು ಆಯುಕ್ತರು ಸೂಚನೆ ನೀಡಿದರು.
‘ವಾಹನ ದಟ್ಟಣೆ ಹೆಚ್ಚಿರುವ ಪ್ರಮುಖ ರಸ್ತೆಗಳ ದುರಸ್ತಿಗೆ ಆದ್ಯತೆ ನೀಡಬೇಕು. ನಂತರ ಉಳಿದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಆರಂಭಿಸಬೇಕು’ ಎಂದರು. ಮುಖ್ಯ ಎಂಜಿನಿಯರ್ ಎಂ.ಆರ್. ವೆಂಕಟೇಶ್ ಹಾಜರಿದ್ದರು.