ಬೆಂಗಳೂರು: ಮಲೇರಿಯಾ ಹಾವಳಿ ಸಂಪೂರ್ಣವಾಗಿ ತಗ್ಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಸ್ಥಿರ ಪ್ರಯತ್ನದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಮಲೇರಿಯಾದಿಂದ ಒಂದು ಸಾವು ಸಂಭವಿಸಿಲ್ಲ.
ರಾಜ್ಯದಲ್ಲಿ 2006ರಲ್ಲಿ 26 ಮಂದಿ, 2007ರಲ್ಲಿ 18 ಮಂದಿ ಸಾವನ್ನಪ್ಪಿದ್ದರು. ಮಲೇರಿಯಾದಿಂದ ಸಾವನ್ನಪ್ಪಿದವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದನ್ನು ದಾಖಲೆಗಳು ತಿಳಿಸುತ್ತವೆ.
ಶುಕ್ರವಾರ ಮಲೇರಿಯಾ ದಿನಾಚರಣೆ ಪ್ರಯುಕ್ತ ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಇಲಾಖೆಯ ಸಂಶೋಧನಾ ಅಧಿಕಾರಿ ಡಾ.ಜಗದೀಶ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಸಿಂಗ್,‘ ಮಲೇರಿಯಾ ಹಾವಳಿಯಿಂದ ಸತ್ತವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿಯೇ ಅತಿ ಹೆಚ್ಚು ಮಲೇರಿಯಾ ಪ್ರಕರಣಗಳು ಕಂಡುಬಂದಿವೆ’ ಎಂದು ತಿಳಿಸಿದರು.