ಬೆಂಗಳೂರು: ವೇತನ ಹೆಚ್ಚಳ ಬೇಡಿಕೆ ಕುರಿತು ರಾಜ್ಯ ಸರ್ಕಾರ ಹಾಗೂ ಸಾರಿಗೆ ನಿಗಮಗಳ ನೌಕರರ ನಡುವೆ ಸಂಧಾನ ಏರ್ಪಡದೆ ಇರುವುದರಿಂದ ರಾಜ್ಯದ ಕೆಲವು ಭಾಗಗಳು ಹಾಗೂ ಬೆಂಗಳೂರು ಸೇರಿದಂತೆ ಭಾನುವಾರ ಬೆಳಗ್ಗೆಯಿಂದಲೇ ಸಾರಿಗೆ ಸಂಸ್ಥೆ ಬಸ್ಸುಗಳು ರಸ್ತೆಗೆ ಇಳಿದಿಲ್ಲ.
ಮಂಡ್ಯ, ಮೈಸೂರು ಹಾಗೂ ಉತ್ತರ ಕನಾರ್ಟಕದ ಹಲವು ಭಾಗಗಳು ಮತ್ತು ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಸುಗಳು ಸಂಚರಿಸಲಿಲ್ಲವಾದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಮುಷ್ಕರ ನಡೆಯಲಿದೆ ಎಂದು ನೌಕರರು ತಿಳಿಸಿದ್ದಾರೆ.
ಎರಡು ದಿನ ಶಾಲಾ ಕಾಲೇಜಿಗೆ ರಜೆ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯದೆಲ್ಲಡೆ ಎರಡು ದಿನಗಳು ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ಮುಂದುವರಿದ ಬಿಕ್ಕಟ್ಟು: ಸಾರಿಗೆ ನೌಕರರ ವೇತನವನ್ನು ಶೇ 10ರಷ್ಟು ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ, ಶೇ 35ರಷ್ಟು ಏರಿಕೆಗೆ ನೌಕರರು ಪಟ್ಟು ಹಿಡಿದಿರುವುದರಿಂದ ಬಿಕ್ಕಟ್ಟು ಮುಂದುವರಿದಿದೆ.
ಶೇ 35ರಷ್ಟು ವೇತನ ಪರಿಷ್ಕರಣೆ ಸಾಧ್ಯ ಇಲ್ಲ. ಆದರೆ, ಕೊಡುಕೊಳ್ಳುವ ಆಧಾರದಲ್ಲಿ ಸೌಹಾರ್ದಯುತ ಮಾತುಕತೆಗೆ ಸರ್ಕಾರ ಬದ್ಧವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಮುಷ್ಕರ ನಡೆಸುವ ನೌಕರರ ಮೇಲೆ ಅಗತ್ಯ ವಸ್ತುಗಳ ಸೇವಾ ಕಾಯ್ದೆ (ಎಸ್ಮಾ) ಕಾಯ್ದೆ ಜಾರಿಗೊಳಿಸುವ ಕುರಿತು ಇನ್ನೂ ಯೋಚನೆ ಮಾಡಿಲ್ಲ. ನೌಕರರ ಹಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ ಎಂದೂ ಸಚಿವರು ಹೇಳಿದರು.