ನವದೆಹಲಿ: ಉತ್ತರ ಪ್ರದೇಶದ ದಾದ್ರಿ ಬಳಿಯ ಬಿಸಾಡಾ ಗ್ರಾಮದಲ್ಲಿ ಗೋಮಾಂಸ ಸೇವನೆ ಕಾರಣಕ್ಕೆ ಹತ್ಯೆಗೊಳಗಾದ ಮಹಮ್ಮದ್ ಇಕ್ಲಾಖ್ ಅವರು ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದು ಗೋಮಾಂಸವಲ್ಲ, ಅದು ಆಡಿನ ಮಾಂಸ ಎಂದು ವಿಧಿವಿಜ್ಞಾನ ಪರೀಕ್ಷೆ ದೃಢಪಡಿಸಿದೆ.
ಇಕ್ಲಾಖ್ ಮನೆಯ ಫ್ರಿಜ್ನಿಂದ ವಶಪಡಿಸಿಕೊಂಡ ಮಾಂಸದ ಮಾದರಿಯನ್ನು ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದರು. ಪ್ರಾಥಮಿಕ ಪರೀಕ್ಷೆ ವರದಿಯಲ್ಲೇ ಇದು ಆಡಿನ ಮಾಂಸ ಎನ್ನುವುದು ದೃಢಪಟ್ಟಿತ್ತು. ಆದರೂ, ಇದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಇನ್ನೊಂದು ಪ್ರಯೋಗಾಲಯಕ್ಕೆ ಈ ಮಾದರಿಯನ್ನು ಕಳುಹಿಸಿದ್ದರು. ಅಲ್ಲಿಂದಲು ವರದಿ ಬಂದಿದ್ದು, ಆಡಿನ ಮಾಂಸವೇ ಎನ್ನುವುದು ಖಚಿತಗೊಂಡಿದೆ.
ಗೋಮಾಂಸ ಸಂಗ್ರಹಿಸಿ ಇಟ್ಟಿದ್ದಾರೆ ಎಂಬ ಕಾರಣಕ್ಕೆ ಇಕ್ಲಾಖ್ ಅವರ ಮನೆಯ ಮೇಲೆ ಸೆ.28ರಂದು 200ಕ್ಕೂ ಹೆಚ್ಚು ಮಂದಿ ಇದ್ದ ಗುಂಪು ದಾಳಿ ನಡೆಸಿ ಅವರನ್ನು ಅಮಾನುಷವಾಗಿ ಕೊಂದು ಹಾಕಿತ್ತು.