ಕೇರಳ ಕರಾವಳಿಯ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರು ಎಂದು ತಪ್ಪಾಗಿ ಭಾವಿಸಿ, ಇಟಲಿ ನೌಕಾಪಡೆಯ ಸಿಬ್ಬಂದಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಇಬ್ಬರು ಆರೋಪಿಗಳಲ್ಲಿ ಒಬ್ಬರು ಕ್ರಿಸ್ಮಸ್ ಸಂಭ್ರಮಾಚರಣೆಗೆ ಇಟಲಿಗೆ ತೆರಳಲು ಅವಕಾಶ ನೀಡಬೇಕು ಎಂದು ಕೋರ್ಟ್ಗೆ ಮನವಿ ಮಾಡಿದ್ದರು. ಇಟಲಿಯಲ್ಲಿಯೇ ಇರುವ ಇನ್ನೊಬ್ಬರು, ಸ್ವದೇಶದಲ್ಲಿ ತಂಗಲು ನೀಡಿರುವ ಕಾಲಾವಧಿಯನ್ನು ಎರಡು ತಿಂಗಳು ವಿಸ್ತರಿಸಬೇಕೆಂದು ವಿನಂತಿಸಿಕೊಂಡಿದ್ದರು.
ಆದರೆ, ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರನ್ನೊಳಗೊಂಡ ಪೀಠ ಈ ಎರಡೂ ಅರ್ಜಿಗಳನ್ನು ವಜಾಗೊಳಿಸಿತು. ವಿಚಾರಣೆ ಪೂರ್ಣಗೊಳ್ಳುವವರೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಇಟಲಿ ನೌಕಾ ಸಿಬ್ಬಂದಿ ಮಸ್ಸಿಮಿಲಿಯಾನೊ ಲಟೊರೆ ಅವರು, ಜನವರಿ 8ರಂದು ತಮಗೆ ಹೃದಯದ ಶಸ್ತ್ರಚಿಕಿತ್ಸೆ ಇರುವುದರಿಂದ ಇಟಲಿಯಲ್ಲಿ ತಂಗಲು ನೀಡಿರುವ ಕಾಲಾವಧಿಯನ್ನು ಇನ್ನೂ ಎರಡು ತಿಂಗಳು ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು. ಇನ್ನೊಬ್ಬ ಸಿಬ್ಬಂದಿ ಸಾಲ್ವಟೊರ್ ಜಿರೊನ್ ಅವರು ಕ್ರಿಸ್ಮಸ್ ಆಚರಣೆಗಾಗಿ ಸ್ವದೇಶಕ್ಕೆ ಹೋಗಲು ಅವಕಾಶ ನೀಡಬೇಕೆಂದು ಕೇಳಿದ್ದರು.