ಹುಬ್ಬಳ್ಳಿ: ‘ಇತಿಹಾಸ, ನಡೆದ ಘಟನೆಯನ್ನು ಬದಲಿಸುವ ಶಕ್ತಿ ನನಗಿಲ್ಲ. ನಿನ್ನೆ, ಇಂದು ಹಾಗೂ ಯಾವಾಗಲೂ ನಾನು ಸತ್ಯದ ಆರಾಧಕ. ಎಷ್ಟೇ ತೊಂದರೆಯಾದರೂ ಸತ್ಯದ ಪ್ರತಿಪಾದನೆಯನ್ನು ನಾನು ನಿಲ್ಲಿಸುವುದಿಲ್ಲ’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದರು.
ತಮ್ಮ ಆತ್ಮಚರಿತ್ರೆ ‘ನಾನು ಪಾಟೀಲ ಪುಟ್ಟಪ್ಪ’ ಕೃತಿಯಲ್ಲಿ ಶಿವರಾಮ ಕಾರಂತರ ಮದುವೆ ವಿಷಯ ಪ್ರಸ್ತಾಪಕ್ಕೆ ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಕಾರಂತರ ಕುರಿತು ನಾನು ಸತ್ಯ ಸಂಗತಿಯನ್ನು ಬರೆದರೆ ಕೆಲವರು ಆಕಾಶವೇ ಕಳಚಿ ಬಿದ್ದಂತೆ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದು ನೋವಿನಿಂದ ನುಡಿದರು.
‘ಯಾರಿಗೋ ನೋವು ಆಗುತ್ತದೆ ಎಂದು ಸತ್ಯವನ್ನು ಅವಮಾನಿಸುವುದು ಸರಿಯಲ್ಲ ಎಂದು ರವೀಂದ್ರನಾಥ್ ಟ್ಯಾಗೋರ್ ಹೇಳಿದ್ದಾರೆ. ಸತ್ಯವೇ ಹಾಗೆ. ಅದು ಯಾವಾಗಲೂ ಕಹಿ’ ಎಂದರು. ‘ಕಾರಂತ ಕುರಿತು ನಾನು ಬರೆದಿದ್ದನ್ನು ಪ್ರಶ್ನಿಸುವ ಈ ತಾಯಿ ಯಾವಾಗ ಇದ್ದರು. ಅವರು ಕಾರಂತರ ಜೀವನದಲ್ಲಿ ಯಾವಾಗ ಬಂದರು’ ಎಂದು ಮಾಲಿನಿ ಮಲ್ಯ ಅವರ ಹೆಸರು ಪ್ರಸ್ತಾಪಿಸದೇ ಪ್ರಶ್ನಿಸಿದರು.
‘ಕಾರಂತರ ಕುರಿತು ನನಗೆ ಮಾಹಿತಿ ನೀಡಿದವರು ನಂಬುವಂತಹ ಜನರೇ ಇದ್ದರು. ಪುತ್ತೂರು ಮೂಲದ ಯಕ್ಷಗಾನ ಕಲಾವಿದ ನಾರಾಯಣ ಕಿಲ್ಲೆ ಹಾಗೂ ಕೆ.ಕೆ.ಶೆಟ್ಟಿ ಎಂಬುವವರು ನನ್ನ ಹೇಳಿಕೆಗಳಿಗೆ ಆಧಾರ ಒದಗಿಸಿದವರು’ ಎಂದು ಹೇಳಿದರು. ‘ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ನಾರಾಯಣ ಕಿಲ್ಲೆ 1946ರಲ್ಲಿ ಹುಬ್ಬಳ್ಳಿಗೂ ಬಂದಿದ್ದರು. ಅವರು ಕಾರಂತರ ಕುರಿತು ಮಾತ್ರವಲ್ಲ; ಕಮಲಾದೇವಿ ಚಟ್ಟೋಪಾಧ್ಯಾಯ ಕುರಿತೂ ಹೇಳುತ್ತಿದ್ದರು’ ಎಂದು ವಿವರಿಸಿದರು.
‘ಶೆಟ್ಟಿಯವರು ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ರಸವತ್ತಾದ ಕಥೆಗಳನ್ನು ಹೇಳುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಬಗ್ಗೆ ಶೆಟ್ಟಿ ಅವರಷ್ಟು ತಿಳಿದುಕೊಂಡಿದ್ದವರು ಯಾರೂ ಇರಲಿಲ್ಲ’ ಎಂದರು. ‘ನನಗೆ ಗೊತ್ತಿರುವ ಮಾಹಿತಿಯನ್ನೆಲ್ಲ ನಾನು ಬರೆಯಲು ಹೋಗಿಲ್ಲ. ಒಂದು ಸಂಗತಿಯನ್ನು ಮಾತ್ರ ಪ್ರಸ್ತಾಪಿಸಿದ್ದೇನೆ. ಒಂದು ದೃಷ್ಟಿಯಿಂದ ನಾವೆಲ್ಲ ತುಂಬಾ ಮಡಿವಂತರಾಗಿದ್ದೇವೆ. ಇಂಗ್ಲಿಷ್ ಬರಹಗಾರರ ಬಗ್ಗೆ ನಾನು ಹೇಳುವಂತಹ, ಹೇಳದೇ ಇರುವಂತಹ ಅನೇಕ ಸಂಗತಿಗಳು ನನಗೆ ತಿಳಿದಿವೆ. ಬಹುತೇಕ ಎಲ್ಲ ಬರಹಗಾರರು ಅವರ ಚಾರಿತ್ರ್ಯ ಹೇಗೆ ಇದ್ದರೂ ನಮಗೆಲ್ಲ ಅವರು ಪವಿತ್ರ ವ್ಯಕ್ತಿಗಳೇ ಆಗಿದ್ದಾರೆ’ ಎಂದು ಹೇಳಿದರು.
‘ನಾನು 1944ರಿಂದ ಕಾರಂತರನ್ನು ಬಲ್ಲೆ. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಅವರು ನನ್ನ ರೂಮಿನಲ್ಲಿಯೇ ಉಳಿದುಕೊಂಡಿದ್ದರು. ಕಾರಂತರು ನಮ್ಮ ಲೇಖಕರಲ್ಲಿಯೇ ಭಿನ್ನ ಎಂದು ತಿಳಿದು ಗೌರವಿಸುತ್ತಿದ್ದೆ. ಈಗಲೂ ಆ ಗೌರವ ಕಡಿಮೆಯಾಗಿಲ್ಲ. ಆದರೆ, ನಾನು ಕಾರಂತರ ವೈರಿ ಅನ್ನೋ ರೀತಿಯಲ್ಲಿ ಅವರು (ಮಾಲಿನಿ ಮಲ್ಯ) ಹೇಳಿದ್ದಾರೆ’ ಎಂದೂ ಹೇಳಿದರು.
‘ಮಂಗಳೂರು ವಿಶ್ವವಿದ್ಯಾಲಯ ಕಾರಂತರ ಕುರಿತು ಪುಸ್ತಕ ಹೊರತಂದಿತ್ತು. ವಿವಿ ಕಳಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ನೋಡಿ ಕಾರಂತರು ಕೆಂಡಾಮಂಡಲವಾದರು. ಆಮಂತ್ರಣ ಪತ್ರಿಕೆಯಲ್ಲಿ ಮಾಲಿನಿ ಮಲ್ಯ ಅವರ ಹೆಸರು ಇಲ್ಲದಿರುವುದೇ ಅವರ ಕೋಪಕ್ಕೆ ಕಾರಣವಾಗಿತ್ತಲ್ಲದೇ, ಇವುಗಳನ್ನು ಹಂಚಲು ಬಿಡುವುದಿಲ್ಲ ಎಂಬುದಾಗಿ ಕಾರಂತರು ಗುಡುಗಿದ್ದರು’ ಎಂದು ಪಾಟೀಲ ಪುಟ್ಟಪ್ಪ ನೆನಪಿಸಿಕೊಂಡರು.
‘ಮಾಲಿನಿ ಅವರ ಬಗ್ಗೆ ಕಾರಂತರಿಗೆ ಅಷ್ಟೊಂದು ಮೋಹ ತುಂಬಿಕೊಂಡಿತ್ತು. ತಮ್ಮ ಪುಸ್ತಕಗಳ ಹಕ್ಕುಗಳನ್ನು ತಮ್ಮ ಮಕ್ಕಳಿಗೆ ನೀಡದೇ ಮಾಲಿನಿ ಅವರಿಗೇ ನೀಡಿದ್ದರು. ಯಾರಾದರೂ ಕಾರಂತರ ಲೇಖನಗಳ ಅವತರಣಿಕೆ ಪ್ರಕಟಿಸಬೇಕು ಎಂದರೆ ಮಾಲಿನಿ ಮಲ್ಯ ಅವರ ಅನುಮತಿ ಬೇಕು’ ಎಂದೂ ವ್ಯಂಗ್ಯಭರಿತ ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.