ಚಿತ್ರ–ವಿಚಿತ್ರ ಕಾಮಿಡಿಗಳನ್ನು ಮಾಡಿ ಜನಪ್ರಿಯನಾಗಿದ್ದ ಹಾಸ್ಯ ಕಲಾವಿದ ತನ್ಮಯ್ ಭಟ್ ಈಚೆಗೆ ಲತಾ ಮಂಗೇಶ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡಿರುವ ತುಣುಕನ್ನು ಯೂಟ್ಯೂಬ್ನಲ್ಲಿ ತೇಲಿಬಿಟ್ಟಿದ್ದರು.
‘ಸಚಿನ್ ತೆಂಡೂಲ್ಕರ್ ವರ್ಸಸ್ ಲತಾ ಸಿವಿಲ್ ವಾರ್’ ಎಂಬ ಶೀರ್ಷಿಕೆಯಡಿ ಯೂಟ್ಯೂಬ್ನ ವಿಡಿಯೊವನ್ನು ತನ್ಮಯ್ ತಮ್ಮ ಫೇಸ್ಬುಕ್ ಪುಟದಲ್ಲೂ ಹಂಚಿಕೊಂಡಿದ್ದರು. Sachin Vs Lata by Tanmay bhatt ಹೆಸರಿನ ಈ ವಿಡಿಯೊ ಬಗ್ಗೆ ಇದೀಗ ಬಾಲಿವುಡ್ನ ಘನಾನುಘಟಿಗಳು ಆಕ್ಷೇಪ ದಾಖಲಿಸಿದ್ದಾರೆ. ಟ್ವಿಟರ್ನಲ್ಲಿ ಪುಂಖಾನುಪುಂಖವಾಗಿ ಟೀಕೆಗಳು ಹರಿದು ಬರುತ್ತಿವೆ.
ಸಚಿನ್ ಅವರ ಮಾತಿನ ಧಾಟಿ ಅನುಕರಿಸಿರುವ ತನ್ಮಯ್, ಕ್ರಿಕೆಟ್ ದೇವರನ್ನು ಅಪಹಾಸ್ಯ ಮಾಡಿ, ವಿರಾಟ್ ಕೊಹ್ಲಿಗೆ ಸವಾಲು ಹಾಕಿದ್ದಾರೆ. ಲತಾ ಮಂಗೇಶ್ಕರ್ ಬಗ್ಗೆ ಮಾತನಾಡುತ್ತಾ, ‘ನಿನ್ನನ್ನೊಮ್ಮೆ ನೋಡಿಕೋ. ಜಾನ್ ಸ್ನೋ ಕೂಡಾ ಸತ್ತ. ಹಾಗಾಗಿ ನೀನೂ ಸಾಯಬೇಕು’ ಎಂದು ವ್ಯಂಗ್ಯ ಮಾಡಿದ್ದಾರೆ.
ವಿಡಿಯೊ ಬಗ್ಗೆ ಟ್ವೀಟಿಸಿರುವ ನಟ ಅನುಪಮ್ ಖೇರ್. ‘ನಾನು ಒಂಬತ್ತು ಬಾರಿ ಉತ್ತಮ ಹಾಸ್ಯ ಕಲಾವಿದ ಪ್ರಶಸ್ತಿ ಗೆದ್ದಿದ್ದೇನೆ. ನನಗೂ ಅದ್ಭುತವಾದ ಹಾಸ್ಯ ಪ್ರಜ್ಞೆ ಇದೆ. ಆದರೆ, ಇದು ಹಾಸ್ಯವಲ್ಲ. ಇದು ಗೌರವಯುತವಾಗಿಲ್ಲ’ ಎಂದು ಕಿಡಿ ಕಾರಿದ್ದಾರೆ.
‘ತಮಾಷೆಗಾದರೂ ಮತ್ತೊಬ್ಬರಿಗೆ ಅಗೌರವ ತೋರುವುದನ್ನು ಸಹಿಸಲಾಗದು’ ಎಂದು ನಟ ರಿತೇಶ್ ದೇಶ್ಮುಖ್ ಟ್ವೀಟ್ ಮಾಡಿದ್ದಾರೆ. ನಟಿ ಸೆಲಿನಾ ಜೇಟ್ಲಿ ಟ್ವೀಟ್ ಮಾಡಿ, ‘ತನ್ಮಯ್ ಅವರು ತಕ್ಷಣ ಲತಾ ಮಂಗೇಶ್ಕರ್ ಅವರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಆದರೆ ಈ ಟೀಕೆಗಳಿಗೂ ಆಕ್ಷೇಪಗಳು ದಾಖಲಾಗಿವೆ.
‘ಸಲಿಂಗಿಗಳು, ಕಪ್ಪುಜನರು ಮತ್ತು ಮಹಿಳೆಯರ ಬಗ್ಗೆ ಹಾಸ್ಯ ಮಾಡಿದಾಗ ಸೊಲ್ಲೆತ್ತದ ನೀವು ಬಹುಸಂಖ್ಯಾತರು ಆರಾಧಿಸುವ ಐಕಾನ್ಗಳ ಬಗ್ಗೆ ಮಾತನಾಡಿದಾಗ ಮಾತ್ರ ಸಿಟ್ಟಿಗೇಳುತ್ತೀರಿ’ ಎಂದು ಹಲವರು ಅನುಪಮ್ ಖೇರ್ ಅವರ ವಿರುದ್ಧ ಮುಗಿಬಿದ್ದಿದ್ದಾರೆ.
ಅವರದೇ ಜೀವನದ ಸನ್ನಿವೇಶಗಳನ್ನು ಪ್ರಸ್ತಾಪಿಸುತ್ತಾ ತಿರುಗೇಟು ಕೊಡುತ್ತಿದ್ದಾರೆ. ಒಟ್ಟಾರೆ ಇದೀಗ ಬಾಲಿವುಡ್ ಅಂಗಳದಲ್ಲಿ ಹಾಸ್ಯ– ಅಪಹಾಸ್ಯ, ಉತ್ತಮ ಹಾಸ್ಯ– ಕೆಟ್ಟ ಹಾಸ್ಯದ ಚರ್ಚೆ ಕಾವೇರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.