ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ‘ಪಿಎಚ್.ಡಿ. ಮೌಖಿಕ ಪರೀಕ್ಷೆಗೆ ಉಮಾಶ್ರೀ, ಸಿ.ಟಿ. ರವಿ’– ಎಂದು ‘ಪ್ರಜಾವಾಣಿ’ ಪುಟ 4ರಲ್ಲಿ (ಏ.20) ಅವರವರ ಭಾವಚಿತ್ರಗಳ ಸಹಿತ ಪ್ರಕಟವಾಗಿದೆ. ಒಬ್ಬರು ಹಾಲಿ ಮಂತ್ರಿ, ಒಬ್ಬರು ಮಾಜಿ ಮಂತ್ರಿ. ಇವರಿಗೆ ‘ಜನಸೇವೆ’ ಮಾಡುವುದೇ ಮುಖ್ಯ ಕಾಯಕವಾಗಿರುವಾಗ ‘ಸಂಶೋಧನೆ’ಗೆ ಎಲ್ಲಿ ಸಮಯವಿರುತ್ತದೆ?
ಈಗ ಈ ಮುಕ್ತ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಡಾ.ಎಂ.ಜಿ. ಕೃಷ್ಣನ್ ಅವರು ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾಗ ಇವರಿಗೆ ಒಬ್ಬ ರಾಜಕಾರಣಿ, ಮತ್ತೊಬ್ಬ ಕಲಾವಿದೆ ಬೆನ್ನುಹತ್ತಿ ಅವರಿಂದ ಮಾರ್ಗದರ್ಶನ ಪಡೆದು, ಪಿಎಚ್.ಡಿ. ಪದವಿಗಳನ್ನು ಪಡೆದ ವರದಿಯನ್ನು ಓದಿದ್ದೆ. ಈ ಕೃಷ್ಣನ್ ಅವರು ಹೋದ ಕಡೆಯೆಲ್ಲಾ ಈ ರೀತಿ ಪಿಎಚ್.ಡಿ. ಪದವಿಗಳಿಗೆ ಬೆನ್ನುಹತ್ತಿ ಹೋಗುವ ರಾಜಕಾರಣಿಗಳ, ಕಲಾವಿದರ ದಂಡೇ ಇದ್ದಂತಿದೆ! ಇದೆಂಥ ನಂಟು, ಬಾಂಧವ್ಯ?
ಈಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಉಮಾಶ್ರೀ ಅವರನ್ನೇ ಕುರಿತು ಅವರ ಸಂಬಂಧಿಕರೇ ಆದ ಬೆಂಗಳೂರಿನ ಕನ್ನಡ ಅಧ್ಯಾಪಕರೊಬ್ಬರು ಪಿಎಚ್.ಡಿ. ಅಧ್ಯಯನ ಮಾಡುತ್ತಿದ್ದಾರಂತೆ. ಒಬ್ಬರು ಪಿಎಚ್.ಡಿ. ಅಭ್ಯರ್ಥಿ. ಆ ಅಭ್ಯರ್ಥಿಯನ್ನೇ ಕುರಿತು ಇನ್ನೊ ಬ್ಬರು ಪಿಎಚ್.ಡಿ. ಅಧ್ಯಯನ ಮಾಡುವುದು– ಈ ದ್ವಂದ್ವ ಎಷ್ಟರಮಟ್ಟಿಗೆ ಸರಿ? ಉನ್ನತ ಶಿಕ್ಷಣ ಕ್ಷೇತ್ರವೂ ‘ಕುಲಗೆಟ್ಟು’ ಹೋಗಿದೆ ಎಂಬುದಕ್ಕೆ ಇವೆಲ್ಲಾ ದೃಷ್ಟಾಂತಗಳು ಅಲ್ಲವೆ?