ಲಖನೌ (ಐಎಎನ್ಎಸ್): ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ಲೋಕಸಭಾ ಚುನಾವಣೆ ಮೇಲೆ ಟಿವಿ ಚರ್ಚೆ ನಡೆಯುತ್ತಿದ್ದಾಗ ಯುವಕನೊಬ್ಬ ಬೆಂಕಿ ಹಚ್ಚಿಕೊಂಡು, ಬಿಎಸ್ಪಿ ನಾಯಕನನ್ನು ಅಪ್ಪಿಕೊಂಡ ಪರಿಣಾಮ ಇಬ್ಬರಿಗೂ ತೀವ್ರ ಸುಟ್ಟ ಗಾಯಗಳಾಗಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸುಲ್ತಾನ್ಪುರ ಪಟ್ಟಣದ ಟಿಕೋನಿಯ ಪಾರ್ಕ್ನಲ್ಲಿ ಸೋಮವಾರ ರಾತ್ರಿ ದೂರದರ್ಶನದ ‘ಜನಮತ–2014’ ಕಾರ್ಯಕ್ರಮದ ಚಿತ್ರೀಕರಣ ನಡೆಯುತ್ತಿದ್ದಾಗ ಈ ದುರ್ಘಟನೆ ಜರುಗಿದೆ.
ವಿವಿಧ ರಾಜಕೀಯ ಪಕ್ಷಗಳ ನಾಯಕರ ಮಧ್ಯೆ ಚರ್ಚೆ ನಡೆಯುತ್ತಿದ್ದಾಗ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಒದ್ದೆಯಾಗಿದ್ದ ಯುವಕನೊಬ್ಬ ದಿಢೀರ್ ಹೊರನಡೆದು ಬೆಂಕಿ ಹಚ್ಚಿಕೊಂಡನು. ನಂತರ ಆತ ಬಿಎಸ್ಪಿ ನಾಯಕ ಕಮ್ರುಜಾಮ ಫೌಜಿ ಅವರತ್ತ ಮುನ್ನುಗ್ಗಿ, ಅಪ್ಪಿಕೊಂಡನು. ಇದರಿಂದಾಗಿ ಅವರಿಬ್ಬರಿಗೂ ತೀವ್ರ ಸುಟ್ಟ ಗಾಯಗಳಾದವು.
ಯುವಕನನ್ನು ಮಾವು ಜಿಲ್ಲೆಯ ದುರ್ಗೇಶ್ ಎಂದು ಗುರುತಿಸಲಾಗಿದ್ದು ಆತನಿಗೆ ಶೇ 95ರಷ್ಟು ಮತ್ತು ಫೌಜಿ ಅವರಿಗೆ ಶೇ 75ರಷ್ಟು ಸುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಇಲ್ಲಿನ ದೈಹಿಕ ಗಾಯಗಳ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇಬ್ಬರೂ ಜೀವನ್ಮರಣದೊಂದಿಗೆ ಹೋರಾಡುತ್ತಿದ್ದಾರೆ ಎಂದು ವೈದ್ಯರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇವರಿಬ್ಬರನ್ನು ರಕ್ಷಿಸಲು ಮುಂದಾದ ಕಾಂಗ್ರೆಸ್ ನಾಯಕ ರಾಮ್ ಕುಮಾರ್ ಸಿಂಗ್ ಮತ್ತು ಮತ್ತೊಬ್ಬ ಮುಖಂಡ ಚೌಧರಿ ಹೃದಯ್ ರಾಮ್ ವರ್ಮ ಅವರಿಗೂ ಅಲ್ಪಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿವೆ.
ವ್ಯಕ್ತಿಯಿಂದ ಸ್ಥಳೀಯ ಹೋಟೆಲ್ ವೊಂದರ ಕೊಠಡಿ ‘ಕೀ’ಯನ್ನು ವಶಪಡಿಸಿಕೊಳ್ಳಲಾಗಿದೆ. ಇಂತಹ ಕಹಿ ಘಟನೆಗೆ ಕಾರಣ ಏನೆಂಬುದನ್ನು ತಿಳಿಯಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ.