ಫೇಸ್ಬುಕ್ ಬಳಕೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಅದರಿಂದ ಪರಿಸರ- ಪ್ರವಾಸೋದ್ಯಮ ಕುರಿತು ಜಾಗೃತಿ ಮೂಡಿಸಲು ಸಾಧ್ಯ ಎಂದು ತೋರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶಿವಶಂಕರ್ ಬಣಗಾರ್, ಪ್ರಮೋದ್ ಪೈಲೂರು, ರವಿ ಹಗೆಡೆಯವರಂತಹ ಇನ್ನೂ ಹತ್ತಾರು ಗೆಳೆಯರು ತಮ್ಮದೇ ರೀತಿಯಲ್ಲಿ ತಮ್ಮೂರಿನ ನಿಸರ್ಗ, ಜೀವ ವೈವಿಧ್ಯ, ಪ್ರವಾಸಿ ತಾಣಗಳನ್ನು ಪರಿಚಯಿಸಿಕೊಂಡಿದ್ದಾರೆ.
‘ಚಿತ್ರದುರ್ಗ ಲಿಸನರ್ಸ್’... ಎಂಬ ಫೇಸ್ಬುಕ್ ಜಾಲತಾಣದ ಮೂಲಕ ಚಿತ್ರದುರ್ಗದ ಏಳು ಸುತ್ತಿನ ಕೋಟೆ ಹಾಗೂ ಐತಿಹಾಸಿಕ ತಾಣಗಳನ್ನು ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಬಹುಶಃ ಇದೊಂದು ಸಾಂಘಿಕ ಪ್ರಯತ್ನವೆನಿಸುತ್ತಿದೆ. ಶಿರಸಿ ತಾಲ್ಲೂಕಿನ ಬನವಾಸಿ ಸಮೀಪದ ನರೂರಿನ ವಿನಾಯಕ ಭಟ್, ಬ್ಯಾಂಕ್ ಕೆಲಸದಿಂದ ನಿವೃತ್ತಿಯಾದ ಮೇಲೆ ಕಾಡು, ಮೇಡು ಸುತ್ತುತ್ತಾ ಹಣ್ಣು, ಹಂಪಲು ,ಕೆರೆ–ಕಟ್ಟೆ, ಪಕ್ಷಿಗಳ ಚಿತ್ರಗಳನ್ನು ಫೇಸ್ಬುಕ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಯಜ್ಞ ಆಚಾರ್ಯ, ಅರಸೀಕರೆಯ ಕಂಪ್ಯೂಟರ್ ಎಂಜಿನಿಯರ್ ಶ್ರೀರಾಮ್ ಜಮದಗ್ನಿ , ತಿಪಟೂರು ತಾಲ್ಲೂಕಿನ ಗುಂಗರುಮಳೆಯ ಜಿ.ಎಲ್ ಮುರುಳೀಧರ್, ಬೆಂಗಳೂರಿನ ವನ್ಯಜೀವಿ ಪ್ರಿಯ ಕೆ.ಎಸ್. ನವೀನ್, ಪತ್ರಕರ್ತ ಕುಮಾರ ರೈತ. ಇನ್ನೂ ಅನೇಕರು ಪರಿಸರ- ಪ್ರವಾಸೋದ್ಯಮ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಫೇಸ್ಬುಕ್ ನೋಡುವ ರೀತಿಯನ್ನೇ ಬದಲಾಯಿಸುತ್ತಿದ್ದಾರೆ !