ಬೆಂಗಳೂರು: ‘ಅಂಡಮಾನಿನಲ್ಲಿ ಮಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದಾಗ ಈಗಿನ ರಾಜಕಾರಣ ಅಸಹ್ಯ ಹುಟ್ಟಿಸುತ್ತದೆ’ ಎಂದು ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಬೇಸರ ವ್ಯಕ್ತಪಡಿಸಿದರು.
ಸಿರಿವರ ಪ್ರಕಾಶನವು ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎಚ್.ಎಸ್.ಎಂ.ಪ್ರಕಾಶ್ ಅವರು ಇಂಗ್ಲಿಷ್ಗೆ ಅನುವಾದಿಸಿರುವ ಡಾ. ಬಿ.ಟಿ.ಲಲಿತಾನಾಯಕ್ ಅವರ ‘ಗತಿ’ ಕಾದಂಬರಿ, ಡಾ.ಲತಾಗುತ್ತಿ ಅವರ ‘ಅಂದಮಾನಿನ ಎಳೆಯನು ಹಿಡಿದು’ ಪ್ರವಾಸ ಕಥನ ಮತ್ತು ವಿಜಯಾ ಮೋಹನ್ ಅವರ ‘ಜಾತಿ’ ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ದಲಿತ ಮತ್ತು ಬಂಡಾಯ ಚಳವಳಿ ಸಂದರ್ಭದಲ್ಲಿ ಗತಿ ಕಾದಂಬರಿಗೆ ಮಹತ್ವದ ಸ್ಥಾನವಿದೆ. ಸಮಾಜದ ಅಂಚಿನ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಈ ಕೃತಿ ಕೆಲಸ ಮಾಡಿದೆ’ ಎಂದರು.
‘ಜಾತಿ’ ಕಥಾ ಸಂಕಲನವನ್ನು ಕುರಿತು ಮಾತನಾಡಿದ ಲೇಖಕ ಡಾ.ಎಸ್. ನಟರಾಜ್ ಬೂದಾಳ್, ‘ಗಂಡಸರದ್ದು ಅಧಿಕಾರದ ಭಾಷೆ. ಅದರಲ್ಲಿ ವೈವಿಧ್ಯವಿಲ್ಲ. ಆದರೆ ಭಾಷೆ ಹೆಣ್ಣಿನಿಂದ ಹೆಣ್ಣಿಗೆ ಬದಲಾಗುತ್ತಾ ಹೋಗುತ್ತದೆ’ ಎಂದರು.
‘ಎಸ್.ಎಲ್.ಭೈರಪ್ಪ ಅವರ ಕೃತಿ ಬಿಡುಗಡೆಯಾದರೆ ಸಮಾಜದ ಒಂದು ವರ್ಗ ಸಂಭ್ರಮಿಸುತ್ತದೆ. ಮತ್ತೊಂದು ವರ್ಗ ತಲ್ಲಣಗೊಳ್ಳುತ್ತದೆ. ಇಂದಿನ ಬಹುತೇಕ ಸಾಹಿತಿಗಳು ಕಥನ ರಾಜಕಾರಣದ ಮೂಲಕ ಸಾಂಸ್ಕೃತಿಕ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.