‘ಹೈವೇ ಆನ್ ಮೈ ಪ್ಲೇಟ್ II’ ಪುಸ್ತಕ ಬರೆಯಲು ಪ್ರೇರಣೆ ಏನು?
ನಾನು ಎಲ್ಲಿಗೇ ಹೋದರೂ ಅಲ್ಲಿ ಅತಿ ಪ್ರಸಿದ್ಧ ಆಹಾರ ಯಾವುದು? ಎಲ್ಲಿ ಸಿಗುತ್ತದೆ ಎಂಬುದನ್ನು ಹುಡುಕುತ್ತೇನೆ. ಆದ್ದರಿಂದ ಭಾರತದ ಯಾವುದೇ ಮೂಲೆಗೆ ಹೋದರೂ ಅಲ್ಲಿನ ಉತ್ತಮ ಆಹಾರ ಯಾವುದು ಹಾಗೂ ಅದು ಎಲ್ಲಿ ದೊರೆಯುತ್ತದೆ ಎಂಬುದು ಜನರಿಗೆ ಸುಲಭವಾಗಿ ತಿಳಿಯಲಿ ಎನ್ನುವುದು ಈ ಪುಸ್ತಕದ ಮುಖ್ಯ ಉದ್ದೇಶ.
ಇದುವರೆಗೂ ನಾವು ಸುತ್ತಿರುವ ಭಾರತೀಯ ನಗರಗಳ ಸ್ಥಳೀಯ ಆಹಾರಗಳ ಪಟ್ಟಿಯನ್ನು ಒಂದೆಡೆ ಕೂಡಿಸುವ ಕೆಲಸ ಮಾಡಬೇಕಿತ್ತು. ಇಲ್ಲಿ ಭಾರತೀಯರಿಗೆ ಇಡೀ ಭಾರತದ ಪ್ರಸಿದ್ಧ ಆಹಾರ ಪದ್ಧತಿಗಳನ್ನು ತಿಳಿಸಿಕೊಡುವುದೂ ಮುಖ್ಯವಾಗಿತ್ತು. ಆದ್ದರಿಂದ ಪುಸ್ತಕ ಬರೆಯುವ ಯೋಚನೆ ಮಾಡಿದೆವು.
ಭಾರತ ಸುತ್ತಿದ ಅನುಭವಗಳು ಹೇಗಿದ್ದವು?
ಈ ಏಳೂ ವರ್ಷಗಳು ನಮ್ಮ ಜೀವನದಲ್ಲಿ ಅತ್ಯಂತ ಉತ್ತಮ ದಿನಗಳು ಎನ್ನಬಹುದು. ಗೆಳೆಯರು, ಗೊತ್ತಿರದ ದಾರಿಗಳು ಎಲ್ಲವೂ ಖುಷಿ ನೀಡಿವೆ. ಸ್ವಾತಂತ್ರ್ಯ ಎಂದರೇನು ಎಂಬುದನ್ನು ಕಂಡುಕೊಂಡಿದ್ದೂ ಹೀಗೆಯೇ. ನಮ್ಮ ವೀಕ್ಷಕರನ್ನೂ ನಮ್ಮ ಪಯಣದೊಂದಿಗೇ ಕೊಂಡೊಯ್ದಿದ್ದು ಖುಷಿ ನೀಡಿದ ಕೆಲಸ. ಜೊತೆಗೆ ಅವರ ಪ್ರೀತಿ ಮತ್ತು ಬೆಂಬಲವೇ ಈ ಯಶಸ್ಸಿಗೆ ಕಾರಣವಾಯಿತು.
‘ಹೈವೇ ಆನ್ ಮೈ ಪ್ಲೇಟ್ II’ಪುಸ್ತಕ ಬರೆಯಲು ಎಷ್ಟು ಸಮಯ ತೆಗೆದುಕೊಂಡಿರಿ?
ಈ ಹೆಸರಿನ ಹಿಂದಿರುವ ಗುಟ್ಟೇನು?
ಈ ಷೋ ಅನ್ನು ಎನ್ಡಿಟಿವಿಯಲ್ಲಿ ಪ್ರದರ್ಶಿಸಲಾಯಿತು. ಮುಖ್ಯ ನಗರಗಳ ಹೈವೇಗಳಲ್ಲಿ ನಾವು ಅಲೆದು ಅಲ್ಲಿನ ಆಹಾರ ಪದ್ಧತಿ ಕುರಿತು ತಿಳಿಸಿಕೊಟ್ಟೆವು. ಆದ್ದರಿಂದ ಶೀರ್ಷಿಕೆ ಈ ರೀತಿ ಇದೆ. ಅದು ಜನರಿಗೂ ಇಷ್ಟವಾಯಿತು. ಏಳು ವರ್ಷಗಳ ಅನುಭವಗಳು ಈ ಪುಸ್ತಕದಲ್ಲಿವೆ. ಹತ್ತು ತಿಂಗಳಿನಿಂದ ಅಕ್ಷರರೂಪಕ್ಕೆ ಇಳಿಸಲು ಆರಂಭಿಸಿದ್ದು.
ನಿಮ್ಮ ಈ ಪುಸ್ತಕದಲ್ಲಿ ಓದುಗರನ್ನು ಸೆಳೆಯುವಂತಹ ಸಂದೇಶ ಇದೆಯಾ?
ಖಂಡಿತ ಇದರಲ್ಲಿ ಸಂದೇಶವಿದೆ. ಭಾರತೀಯ ಆಹಾರವನ್ನು ಅರ್ಥೈಸಿಕೊಳ್ಳುವುದೇ ಆ ಸಂದೇಶ. ಪ್ರತಿಯೊಂದು ರಾಜ್ಯದ ಆಹಾರ ಪದ್ಧತಿಯೆಡೆಗೆ ಗೌರವ ಮೂಡಬೇಕು. ಅದು ಅದರೆಡೆಗೆ ಆಸಕ್ತಿಯೂ ಮೂಡಿಸುತ್ತದೆ. ಎಲ್ಲರೂ ಕೇವಲ ಸ್ಥಳೀಯ ಆಹಾರವನ್ನು ಕಂಡುಕೊಳ್ಳುವುದಷ್ಟೇ ಅಲ್ಲದೆ ಇಡೀ ಭಾರತೀಯ ಆಹಾರ ಪದ್ಧತಿಯನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಇಷ್ಟವಾಗಿತ್ತು. ನಿಮ್ಮ ದೇಶವನ್ನು ಪ್ರೀತಿಸಿ, ಅದರ ಆಹಾರ ಪದ್ಧತಿಯನ್ನು ತಿಳಿದುಕೊಳ್ಳಿ. ಏಕೆಂದರೆ ಅತಿ ಅಪರೂಪದ ಆಹಾರಗಳನ್ನು ಭಾರತ ಒಳಗೊಂಡಿದೆ ಎಂಬುದನ್ನು ಜನರಿಗೆ ಹೇಳಬೇಕಿತ್ತು.
ಈ ಪುಸ್ತಕ ನಿಮ್ಮ ಪಯಣದ ಪ್ರತಿಬಿಂಬವೇ?
ನಾವು ಪ್ರಯಾಣ ಮಾಡಿದ ಪ್ರತಿ ಸ್ಥಳವನ್ನೂ, ಈ ಏಳು ವರ್ಷಗಳಲ್ಲಿ ನಾವು ತಿಂದ ಪ್ರತಿ ತಿನಿಸನ್ನೂ ಈ ಪುಸ್ತಕದಲ್ಲಿ ನಮೂದಿಸಲಾಗಿದೆ.
ಪುಸ್ತಕ ಬರೆಯುವಾಗ ಎದುರಿಸಿದ ಸವಾಲುಗಳೇನು?
ಬರೆಯಲು ಕುಳಿತಾಗ ನಮ್ಮ ಬಳಿ ತುಂಬಾ ಮಾಹಿತಿಗಳಿದ್ದವು. ಸಾಕಷ್ಟು ಚಿತ್ರಗಳು ಇದ್ದವು. ಅವೆಲ್ಲವನ್ನೂ ಒಂದೆಡೆ ಹಾಕಿ, ಅವುಗಳಿಂದ ತುಂಬಾ ಮುಖ್ಯ ಮಾಹಿತಿಯನ್ನು ಕಂಡುಕೊಳ್ಳುವುದು ದೊಡ್ಡ ಸವಾಲೆನಿಸಿತ್ತು.
ನಿಮ್ಮ ಓದುಗರಿಗೆ ಹೇಳಬೇಕೆನಿಸಿದ್ದು?
ನೀವೂ ಪ್ರಯಾಣ ಮಾಡಿ, ಎಲ್ಲವನ್ನೂ ಪ್ರಯತ್ನಿಸಿ ನೋಡಿ. ಸ್ಥಳೀಯ ಆಹಾರವನ್ನು ಗೌರವದಿಂದ ತಿನ್ನಿ. ನೋಡಿದ್ದನ್ನು, ಕೇಳಿದ್ದನ್ನು ಮಾತ್ರ ನಂಬಬೇಡಿ, ಪ್ರಯತ್ನಿಸಿ ನಂಬಿ.
ಪ್ರಯಾಣದ ಸಲುವಾಗಿ ಮನೆಯಿಂದ ದೂರ ಉಳಿದಿದ್ದೀರಿ? ಹೇಗನ್ನಿಸಿತು?
ಪ್ರಯಾಣ ಒಂದು ಅಭ್ಯಾಸ ಎನಿಸಿಬಿಟ್ಟಿದೆ. ಒಂದು ವಾರಕ್ಕಿಂತ ಹೆಚ್ಚಿಗೆ ಮನೆಯಲ್ಲಿದ್ದರೆ ಮನಸ್ಸು ಬೇರೆಡೆ ಹೋಗಲು ಬಯಸುತ್ತದೆ. ಪ್ರಯಾಣ ಮಾಡಿ ವಿವಿಧ ಸ್ಥಳಗಳನ್ನು ನೋಡುವುದು ಸುಂದರ ಅನುಭವ. ಭಾರತದ ಪ್ರತಿ ಘಮಲನ್ನು ಅನುಭವಿಸಿದಂತಾಗುತ್ತದೆ.
ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ನನ್ನ ನೆಚ್ಚಿನ ಜಾಗ. ಎಂಥ ಸಂಸ್ಕೃತಿಯನ್ನೂ ಬೇಗ ಅರಗಿಸಿಕೊಂಡುಬಿಡುತ್ತದೆ. ಇಡೀ ವಿಶ್ವದ ಆಹಾರವೇ ಬೆಂಗಳೂರಿನಲ್ಲಿ ಸಿಕ್ಕಿಬಿಡುತ್ತದೆ.
ಸಂದರ್ಶನ: ಪಿ.ಎಸ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.