ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಒಂದೇ ಒಂದು ಪ್ರಕರಣವನ್ನೂ ಅದು ಸಿ.ಬಿ.ಐ.ಗೆ ಒಪ್ಪಿಸಲಿಲ್ಲ. ವಿರೋಧ ಪಕ್ಷದ ಸ್ಥಾನಕ್ಕೆ ಹೊರಳುತ್ತಲೇ ಪ್ರತಿಯೊಂದು ಪ್ರಕರಣವನ್ನೂ ಸಿ.ಬಿ.ಐ. ತನಿಖೆಗೆ ಒಪ್ಪಿಸುವಂತೆ ಆಗ್ರಹಿಸುತ್ತಿದೆ. ಹಟ ಹಿಡಿಯುತ್ತಿದೆ. ಇದು ಆ ಪಕ್ಷದ ದ್ವಿಮುಖ ಧೋರಣೆಯನ್ನು ಎತ್ತಿ ತೋರಿಸುತ್ತದೆ.
ಮಧ್ಯಪ್ರದೇಶದಲ್ಲಿ ‘ವ್ಯಾಪಂ’ ನೇಮಕಾತಿ ಹಗರಣ ದಿನೇ ದಿನೇ ಭಯಾನಕ ಸ್ವರೂಪ ಪಡೆಯುತ್ತಿದೆ. ಈ ಹಗರಣಕ್ಕೆ ಸಂಬಂಧಿಸಿದ 45 ಮಂದಿ ಅನುಮಾನಾಸ್ಪದವಾಗಿ ಸಾವಪ್ಪಿದ್ದರೂ ಪ್ರಕರಣ ವನ್ನು ಸಿಬಿಐಗೆ ಒಪ್ಪಿಸಲು ಆ ಪಕ್ಷದ ನಾಯಕರು ಸಿದ್ಧರಿಲ್ಲ. ರಾಜ್ಯದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿದೆ. ಕೇಂದ್ರದಲ್ಲೂ ಅವರದೇ ಆಡಳಿತ. ಹೀಗಿದ್ದೂ ಅವರಿಗೆ ಸಿಬಿಐ ಅಪಥ್ಯ. ಏಕೆ?
ಇನ್ನು, ರಾಜಾಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪ ಗಳು, ಮಹಾರಾಷ್ಟ್ರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣಗಳನ್ನು ಸಿಬಿಐಗೆ ಏಕೆ ಒಪ್ಪಿಸುತ್ತಿಲ್ಲ?
ನಮ್ಮ ರಾಜ್ಯದ ತನಿಖಾ ಸಂಸ್ಥೆಗಳನ್ನು ಪ್ರತಿ ಹಂತ ದಲ್ಲೂ ಅನುಮಾನದಿಂದ ನೋಡುತ್ತಾ, ಅವುಗಳ ಬಗ್ಗೆ ಹಗುರವಾಗಿ ಮಾತನಾಡಿದರೆ, ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪ್ರಾಮಾಣಿಕರ ಆತ್ಮವಿಶ್ವಾಸ ಕುಂದುವುದಿ ಲ್ಲವೇ? ಈ ಸಂಸ್ಥೆಗಳು ಬೇಡ ಎನ್ನುವುದಾದರೆ ಮುಚ್ಚಿಬಿಡಿ. ಸಿಬಿಐ ಅಧಿಕಾರಿಗಳು ಏನಾದರೂ ದೇವಲೋಕದಿಂದ ಇಳಿದುಬರುವರೇ?