ನವದೆಹಲಿ: ಈ ಸಲ ಮುಂಗಾರು ಮಳೆ ವಾಡಿಕೆಗಿಂತಲೂ ಕಡಿಮೆಯಾಗುವ ಸೂಚನೆ ಇದೆ. ಜುಲೈ– ಆಗಸ್ಟ್ಗಳಲ್ಲಿ ಸುರಿಯುವ ಮಳೆ ಪ್ರಮಾಣ ಗಣನೀಯವಾಗಿ ಕ್ಷೀಣಿಸಬಹುದು. ‘ಎಲ್ ನಿನೊ’ ಪರಿಣಾಮದಿಂದ ಮುಂಗಾರು ಬಲಹೀನಗೊಳ್ಳಬಹುದು ಎಂದು ಮುಂಗಾರು ಮಾರುತ ಕುರಿತ ವೈಜ್ಞಾನಿಕ ಅಧ್ಯಯನವೊಂದು ಹೇಳಿದೆ.
‘ಎಲ್ ನಿನೊ’ (ಶಾಂತಸಾಗರದ ಮೇಲಿನ ವಾತಾವರಣದಲ್ಲಿ ಆಗುವ ಬದಲಾವಣೆ) ಕಾರಣದಿಂದಾಗಿ ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುವ ಸಂಭವ ಶೇ 60ರಷ್ಟು ಇದೆ ಎಂದು ‘ದಕ್ಷಿಣ ಏಷ್ಯಾ ಹವಾಮಾನ ಮುನ್ನೋಟ ವೇದಿಕೆ’ಯ ವರದಿ ತಿಳಿಸಿದೆ.
ಗಂಗಾ ನದಿಯ ಬಯಲು ಪ್ರದೇಶಗಳಾದ ಉತ್ತರ ಪ್ರದೇಶದ ಪೂರ್ವ ಭಾಗ, ಬಿಹಾರ, ಪಶ್ಚಿಮ ಬಂಗಾಳದ ಉತ್ತರ ಭಾಗ ಮತ್ತು ಒಡಿಶಾದ ಈಶಾನ್ಯ ಭಾಗ, ಆಂಧ್ರದ ಉತ್ತರ ಕರಾವಳಿ ಹೊರತುಪಡಿಸಿ ದೇಶದ ಇತರೆಡೆ ಮಳೆ ಕಡಿಮೆಯಾಗಬಹುದು ಎಂದು ಅದು ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯು ಅಧಿಕೃತವಾಗಿ 2014ನೇ ಸಾಲಿನ ನೈಋತ್ಯ ಮುಂಗಾರು ಕುರಿತು ಮುನ್ನೋಟ ಪ್ರಕಟಿಸುವ ಮುನ್ನ ಅಧ್ಯಯನ ಈ ಅಂಶವನ್ನು ತಿಳಿಸಿದೆ.
2014ನೇ ಸಾಲಿನ ಮುಂಗಾರು ಕುರಿತು ಜಾಗತಿಕ ಮತ್ತು ಪ್ರಾದೇಶಿಕ ಮಾದರಿಗಳನ್ನು ಭಾರತ ಮತ್ತು ಇತರ ದೇಶಗಳ ಹವಾಮಾನ ತಜ್ಞರು ವೈಜ್ಞಾನಿಕವಾಗಿ ಅಧ್ಯಯನ ನಡೆಸಿದ್ದಾರೆ.
‘ಎಲ್ ನಿನೊ’ ಪರಿಣಾಮವು ಶಾಂತ ಸಾಗರದ ಮೇಲೆ ಅತಿ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಇದರಿಂದ ಜಾಗತಿಕ ಹಮಾಮಾನದಲ್ಲಿ ತಲ್ಲಣ ಉಂಟಾಗಲಿದೆ ಎಂದು ಹವಾಮಾನ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ವರದಿ ಬಗ್ಗೆ ಪುಣೆಯಲ್ಲಿ ‘ದಕ್ಷಿಣ ಏಷ್ಯಾ ಹವಾಮಾನ ಮುನ್ನೋಟ ವೇದಿಕೆ’ ಸಭೆಯಲ್ಲಿ ಚರ್ಚೆ ನಡೆದಿತ್ತು.