ನವದೆಹಲಿ (ಐಎಎನ್ಎಸ್): ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಯೋತ್ಪಾದಕರ ದಾಳಿಯ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಂಗಳವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಬ್ಬದ ಸಮಯದಲ್ಲಿ ಭಯೋತ್ಪಾದಕರ ದಾಳಿಯ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಉಗ್ರರ ದಾಳಿಯ ಬೆದರಿಕೆಗಳಿವೆ ಮತ್ತು ಅದಕ್ಕೆ ಸೂಕ್ತ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದು ತಿಳಿಸಿದರು.
ಹಬ್ಬದ ಸಂಭ್ರಮದ ನಡುವೆ ಉದ್ಭವಿಸಬಹುದಾದ ಕೋಮುಗಲಭೆಯ ಸಾಧ್ಯತೆಗಳನ್ನು ನಿಯಂತ್ರಿಸಲು ರಾಜ್ಯಗಳಿಗೆ ಯಾವ ರೀತಿ ನಿರ್ದೇಶನ ನೀಡಲಾಗಿದೆ ಎಂಬ ಪ್ರಶ್ನೆಗೆ ಸಿಂಗ್, ‘ನಾವು ಪಡೆದುಕೊಂಡಿರುವ ಮಾಹಿತಿ ಆಧಾರದಲ್ಲಿ ರಾಜ್ಯಗಳಿಗೆ ಸಲಹೆ ನೀಡಿದ್ದೇವೆ’ ಎಂದರು.