ಜಮ್ಮು (ಪಿಟಿಐ): ‘ಪಾಕಿಸ್ತಾನ ಸರ್ಕಾರ, ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳು ಜಮ್ಮು–ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆಯುವಂತಹ ವಾತಾವರಣ ಸೃಷ್ಟಿಸಿದ್ದರು’ ಎಂದು ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ನೀಡಿರುವ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಯಾಗಿ ಭಾನುವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಯೀದ್, ಪಾಕಿಸ್ತಾನ ಹಾಗೂ ಉಗ್ರಗಾಮಿ ಸಂಘಟನೆಗಳನ್ನು ಶ್ಲಾಘಿಸುವಂತಹ ಹೇಳಿಕೆ ನೀಡಿದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಈ ವಿಚಾರದಲ್ಲಿ ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಸಯೀದ್ ಹೇಳಿದ್ದೇನು?: ‘ನಾನು ಇದನ್ನು ಅಧಿಕೃತವಾಗಿ ಹೇಳಲು ಬಯಸುತ್ತೇನೆ. ರಾಜ್ಯದಲ್ಲಿ ಚುನಾವಣೆ ಸುಗಮವಾಗಿ ನಡೆಯಲು ಉಗ್ರ ಸಂಘಟನೆಗಳು ಹಾಗೂ ಹುರಿಯತ್ ಕಾರಣವಾಗಿವೆ. ಈ ಅಭಿಪ್ರಾಯವನ್ನು ಪ್ರಧಾನಿಗೂ ಹೇಳಿದ್ದೇನೆ. ಗಡಿಯಾಚೆಗಿನ ಜನರು ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟರು.
ಅವರೇನಾದರೂ ಅಡ್ಡಿಪಡಿಸಿದ್ದಲ್ಲಿ ಮತದಾನ ಸಾಧ್ಯವಾಗುತ್ತಿರಲಿಲ್ಲ. ಚುನಾವಣೆಗೆ ಅಡ್ಡಿಪಡಿಸಲು ಸಣ್ಣ ದುಷ್ಕೃತ್ಯ ಸಾಕಿತ್ತು. ಚುನಾವಣೆಯಂತಹ ಪ್ರಜಾಪ್ರಭುತ್ವ ಪ್ರಕ್ರಿಯೆ ಸುಗಮವಾಗಿ ಸಾಗಲು ಅವರು ಆಸ್ಪದ ನೀಡಿದರು. ಇದು ನನ್ನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಕಣಿವೆಯ ಜನ ಭಾರಿ ಪ್ರಮಾಣದಲ್ಲಿ ಬಂದು ಮತ ಹಾಕಿದ್ದು ಸಹ ನನ್ನಲ್ಲಿ ಹೆಮ್ಮೆ ಮೂಡಿಸಿದೆ. ಮಾಜಿ ಪ್ರತ್ಯೇಕತಾವಾದಿ ನಾಯಕ, ಸಜ್ಜದ್ ಗನಿ ಲೋನ್ ಸಂಪುಟ ಸೇರಿರುವುದು ಇತರ ಪ್ರತ್ಯೇಕತಾವಾದಿಗಳಿಗೆ ಮಾದರಿಯಾಗಲಿದೆ.
ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗೆ ಮಾದರಿಯಾಗಬೇಕಾದರೆ, ಉತ್ತಮ ಆಡಳಿತ ನೀಡಬೇಕಾದರೆ ಶಾಂತಿ ಅಗತ್ಯ. ಗುಜರಾತ್ ಜನ ಅಭಿವೃದ್ಧಿಗೆ ಉತ್ತಮ ಆಡಳಿತ ಎಂದಂತೆ ಇಲ್ಲಿ ಉತ್ತಮ ಆಡಳಿತಕ್ಕೆ ಶಾಂತಿ ನೆಲೆಸಲೇಬೇಕು. ಇತಿಹಾಸವು ನಮಗೆ ಅವಕಾಶ ಕೊಟ್ಟಿದೆ. ದೇಶದ ಪ್ರತಿಯೊಬ್ಬ ಪ್ರಧಾನಿಗೂ ಕಾಶ್ಮೀರವು ಸಮಸ್ಯೆಯಾಗಿ ಕಾಡಿದೆ. ಇದನ್ನು ನಾವು ಬದಲಾಯಿಸಬೇಕು.
ಈ ಮೈತ್ರಿಕೂಟದಲ್ಲಿ ನಾವು ಹೃದಯಗಳನ್ನು ಬೆಸೆಯಬೇಕು. ಜನರು ಒಪ್ಪುತ್ತಾರೋ ಬಿಡು ತ್ತಾರೋ ಉತ್ತರ ಹಾಗೂ ದಕ್ಷಿಣ ಧ್ರುವಗಳನ್ನು ಸೇರಿಸುವುದು ನಮ್ಮ ನಿರ್ಧಾರವಾಗಿದೆ’ ಎಂದೂ ಸಯೀದ್ ಸ್ಪಷ್ಟಪಡಿಸಿದರು.
ವಿವರಣೆ ನೀಡಿ
ಪಾಕಿಸ್ತಾನ, ಹುರಿಯತ್ ಹಾಗೂ ಉಗ್ರಗಾಮಿಗಳು ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಸಿ.ಎಂ ಹೇಳಿದ್ದಾರೆ. ಹಾಗಾ ದರೆ ಮತದಾನದಲ್ಲಿ ಭದ್ರತಾ ಪಡೆ ಹಾಗೂ ಚುನಾವಣಾ ಅಧಿಕಾರಿಗಳ ಪಾತ್ರ ಏನಿತ್ತು ಎನ್ನುವುದರ ಬಗ್ಗೆ ವಿವರಣೆ ನೀಡಿ - ಒಮರ್ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ
ಸೇನೆ, ಆಯೋಗ ಕಾರಣ
ಕಾಶ್ಮೀರದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯಲು ಚುನಾವಣಾ ಆಯೋಗ ಹಾಗೂ ಸೇನೆ ಕಾರಣವಾಗಿದೆ. ಭಾರತದ ಸಂವಿಧಾನದ ಮೇಲೆ ನಂಬಿಕೆ ಹೊಂದಿರುವವರು ನಮಗೆ ಮತ ಹಾಕಿದ್ದಾರೆ –ಬಿಜೆಪಿ
ಮುಫ್ತಿ ಅಧಿಕಾರ ಸ್ವೀಕಾರ; ಮೋದಿ, ಅಡ್ವಾಣಿ ಉಪಸ್ಥಿತಿ
ಜಮ್ಮು: ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರ ಜಮ್ಮು–ಕಾಶ್ಮೀರದಲ್ಲಿ ಭಾನುವಾರ ಅಧಿಕಾರ ಸ್ವೀಕರಿಸಿದೆ. ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಜತೆಗೆ ಅವರ ಸಂಪುಟದ ೨೫ ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಈ ಪೈಕಿ ಮಾಜಿ ಪ್ರತ್ಯೇಕತಾವಾದಿ ಮುಖಂಡ ಸಜ್ಜದ್ ಲೋನ್ ಕೂಡ ಒಬ್ಬರು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ‘ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸಲು ಪಿಡಿಪಿ–ಬಿಜೆಪಿ ಸರ್ಕಾರಕ್ಕೆ ಐತಿಹಾಸಿಕ ಅವಕಾಶ ಸಿಕ್ಕಿದೆ’ ಎಂದರು.
ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಪಕ್ಷದ ಅಧ್ಯಕ್ಷ ಅಮಿತ್ ಷಾ, ಪ್ರಧಾನ ಕಾರ್ಯದರ್ಶಿ ರಾಮ್್ ಮಾಧವ್ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.