ರಾಮನಗರ: ರೋಟರಿ ಸಂಸ್ಥೆ ಮತ್ತು ಬೆಂಗಳೂರಿನ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಗಳು ಸಂಯುಕ್ತವಾಗಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದವು.
ನಗರದ ಹೋಲಿ ಕ್ರೆಸೆಂಟ್ ಶಾಲೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಮನಗರ ಚನ್ನಪಟ್ಟಣ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿಅಧ್ಯಕ್ಷ ರಾಜಶೇಖರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರ ಸೇವೆಯಲ್ಲಿ ರಾಮನಗರ ರೋಟರಿ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ತಪಾಸಣಾ ಚಿಕಿತ್ಸೆಗಳನ್ನು ಹಮ್ಮಿಕೊಂಡು ಸಾಮಾಜಿಕ ಕಳಕಳಿ ಮೆರೆಯುತ್ತಿದೆ. ನೇತ್ರ ತಪಾಸಣೆಯ ಜೊತೆಗೆ ಅಗತ್ಯವಿದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ನೆರೆವೇರಿಸಲಾಗುತ್ತಿದೆ ಎಂದರು.
ರೋಟರಿ ಅಧ್ಯಕ್ಷ ಅಲ್ತಾಫ್ ಅಹಮದ್ ಮಾತನಾಡಿ ಸಮಾಜ ಸೇವೆಯಲ್ಲಿ ರಾಮನಗರ ರೋಟರಿ ಸಂಸ್ಥೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ತಮ್ಮ ಅವಧಿಯಲ್ಲಿ ಹತ್ತು ಹಲವು ಸಮಾಜಮುಖಿ ಆರೋಗ್ಯಕರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ಶಿಬಿರದ ಲಾಭವನ್ನು 150 ಮಂದಿ ಪಡೆದುಕೊಂಡಿದ್ದಾರೆ. ಈ ಪೈಕಿ 35 ಮಂದಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಾಗಿದ್ದು, ಸಂಪೂರ್ಣವಾಗಿ ಉಚಿತವಾಗಿ ನೆರೆವೇರಿಸಲಾಗುವುದು ಎಂದರು.
ರೋಟರಿ ಕಾರ್ಯದರ್ಶಿ ಡಿ.ಪಿ.ಶಂಕರಲಿಂಗೇಗೌಡ, ಸಮುದಾಯ ಸೇವೆ ನಿರ್ದೇಶಕ ಡಿ.ಕೆ.ಪುಟ್ಟಸ್ವಾಮಿ ಅವರು, ಮಾಜಿ ಅಧ್ಯಕ್ಷರುಗಳಾದ ಹೆಚ್. ಚಂದ್ರಶೇಖರ್, ಸಿದ್ದಪ್ಪಾಜಿ, ಅರ್.ವಿ ಸುರೇಶ್, ಬಿ.ಉಮೇಶ್, ಆರ್.ಜಿ. ಚಂದ್ರಶೇಖರ್, ಎಮ್.ಚಂದ್ರಶೇಖರ್, ಎಮ್.ಕೆ. ಮರಿಸ್ವಾಮಿ, ರೋಟರಿ ಪ್ರಮುಖರಾದ ಎಚ್.ಪಿ. ಮಹಾಲಿಂಗಯ್ಯಾ, .ಪಿ. ಉಮೆಶ್, ಡಿ.ಪುಟ್ಟಸ್ವಾಮಯ್ಯಾ, ಕೆ.ಎಸ್. ಕಾಂತರಾಜು, ಬಿ. ರಾಮಕೃಷ್ಣಯ್ಯ ಭಾಗವಹಿಸಿದ್ದರು.